ಸಂಕಷ್ಟದ ಸಮಯದಲ್ಲಿ ಚುನಾವಣೆ ಗೆಲುವಿನ ಸಂಭ್ರಮಾಚರಣೆ ಬೇಡ: ಡಿಕೆಶಿ ಮನವಿ | ಜನತಾ ನ್ಯೂಸ್
ಬೆಂಗಳೂರು : ಮಸ್ಕಿ ಕ್ಷೇತ್ರದಲ್ಲಿ ಬಹಳ ದೊಡ್ಡ ಅಂತರದಿಂದ ಗೆದ್ದಿದ್ದೇವೆ. ಕಾಂಗ್ರೆಸ್ನ ಬಸನಗೌಡ ತುರವಿಹಾಳ ಗೆಲುವು ಸಾಧಿಸಿದ್ದಾರೆ. ಆದರೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡದಂತೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಕೊವಿಡ್ ನಿಯಮಾವಳಿ ಉಲ್ಲಂಘಿಸದಂತೆ ಡಿಕೆಶಿ ಕೇಳಿಕೊಂಡಿದ್ದಾರೆ.
ಕೋವಿಡ್ ಪಿಡುಗಿನ ಸಂಕಷ್ಟದ ಸಮಯದಲ್ಲಿ ನಾವು ನಮ್ಮ ಜನರ ಜೀವ ಉಳಿಸುವ ಬಗ್ಗೆ ಗಮನ ಹರಿಸಬೇಕು. ಹೀಗಾಗಿ ಚುನಾವಣೆ ಫಲಿತಾಂಶ ಏನೇ ಬರಲಿ, ನಾವು ಸಂಭ್ರಮಾಚರಣೆ ಮಾಡುವುದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಹಿನ್ನೆಲೆಯಲ್ಲಿ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು, ಇವತ್ತು ನಾವೆಲ್ಲ ಫಲಿತಾಂಶ ನೋಡುತ್ತಿದ್ದು, ಮತದಾರರ ತೀರ್ಪನ್ನು ಸ್ವಾಗತ ಮಾಡುತ್ತೇವೆ. ಸೋಲು, ಗೆಲುವು ಎರಡನ್ನೂ ಒಪ್ಪಿಕೊಳ್ಳಬೇಕು. ಇದು ಪ್ರಜಾಪ್ರಭುತ್ವದ ನಿಯಮ ಎಂದರು.
ನಿಯಮಾವಳಿ ಉಲ್ಲಂಘಿಸಿದರೆ ದೂರು ದಾಖಲಿಸಬಹುದು. ಹಾಗಾಗಿ ಯಾವುದೇ ಸಂಭ್ರಮಾಚರಣೆ ಮಾಡ ಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜನ ಬದಲಾವಣೆ ಬಯಸಿದ್ದಾರೆ. ಏನೇ ಫಲಿತಾಂಶ ಆಗಲಿ ರಾಜ್ಯಕ್ಕೆ ಒಳ್ಳೆ ವಾತಾವರಣ ಬಯಸ್ತಿದ್ದಾರೆ. ಮತದಾರರು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸ್ತೇನೆ.
ಇಡೀ ದೇಶದ ಅಧಿಕಾರ, ಅಧಿಕಾರಿಗಳನ್ನು ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ಮಾಡಿ, ಆ ಹೆಣ್ಣು ಮಗಳಿಗೆ ಕೊಟ್ಟಿರುವ ಕಿರುಕುಳ ಕಂಡು ಸಿಟ್ಟಿಗೆದ್ದ ಜನ ಈ ಫಲಿತಾಂಶ ಕೊಟ್ಟಿದ್ದಾರೆ. ಅವರಿಗೆ ಸಾಷ್ಟಾಂಗ ನಮಸ್ಕಾರಗಳು ಎಂದು ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲೂ ಚುನಾವಣೆ ಮುಂದೂಡಿ ಅಂತ ನಾವು ಸಾಕಷ್ಟು ಬಾರಿ ಕೇಳಿಕೊಂಡ್ವಿ. ಆದರೂ ಮಾತು ಕೇಳಲಿಲ್ಲ. ಈಗ ಅನುಭವಿಸ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.