ಆಕ್ಸಿಜನ್ ಸಮಸ್ಯೆಯಿಂದ ಈ ಘಟನೆಯಾಗಿದ್ದರೆ ಸರ್ಕಾರವೇ ಹೊಣೆ ಹೊರಬೇಕು: ಸಿ.ಟಿ.ರವಿ | ಜನತಾ ನ್ಯೂಸ್
ಬೆಂಗಳೂರು : ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿರುವುದು ಕ್ಷಮೆಗೆ ಅರ್ಹವಲ್ಲದ ಘಟನೆ. ಈ ಘಟನೆಗೆ ಸಚಿವರೇ ಹೊಣೆ ಆಗಿದ್ದರೆ ಅವರೇ ಹೊಣೆ ಹೊತ್ತುಕೊಳ್ಳಬೇಕು, ಅಧಿಕಾರಿಗಳು ಹೊಣೆಯಾಗಿದ್ದರೆ ಅವರೇ ಹೊಣೆ ಹೊತ್ತುಕೊಳ್ಳಬೇಕು, ಒಂದು ವೇಳೆ ನಾನು ಸಚಿವನಾಗಿ ಇಂತಹ ಘಟನೆ ನನ್ನ ಗಮನಕ್ಕೆ ಬಂದು, ನಾನು ಕ್ರಮ ತೆಗೆದುಕೊಳ್ಳದಿದ್ದರೆ ನಾನೇ ಹೊಣೆ ಹೊರಬೇಕು. ಆಕ್ಸಿಜನ್ ಸಮಸ್ಯೆಯಿಂದ ಈ ಘಟನೆಯಾಗಿದ್ದರೆ ಸರ್ಕಾರವೇ ಹೊಣೆ ಹೊರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಬೇರೆ ರಾಜ್ಯಗಳಲ್ಲಿ ಇಂತಹ ಘಟನೆಗಳು ಸಂಭವಿಸಿವೆ. ಆಗಲೇ ನಾವು ಪಾಠ ಕಲಿಯಬೇಕಾಗಿತ್ತು. ಅದು ಆಗಿಲ್ಲ, ರಾಜೀನಾಮೆ ನೀಡುವುದರಿಂದ ಸಮಸ್ಯೆ ಬಗೆಹರಿದು, ಸತ್ತವರು ವಾಪಸ್ ಬರುತ್ತಾರೆ ಎನ್ನುವುದಾದರೆ ನಮಗೆ ಅಧಿಕಾರ ಮುಖ್ಯವಲ್ಲ. ಮಹಾರಾಷ್ಟ್ರ, ದೆಹಲಿಯಲ್ಲೂ ಇಂತಹ ಘಟನೆಗಳು ಸಂಭವಿಸಿವೆ. ಅಲ್ಲೆಲ್ಲ ಮೊದಲಿಗೆ ರಾಜೀನಾಮೆ ಕೊಡಬೇಕು. ರಾಜಕೀಯ ಅಧಿಕಾರಕ್ಕಿಂತ ಸಮಸ್ಯೆ ಬಗೆಹರಿದು ಸತ್ತವರು ಮರಳುವುದು ಮುಖ್ಯ ಎನ್ನುತ್ತಲೇ ಸಿ.ಟಿ.ರವಿ ಪ್ರತಿಪಕ್ಷಗಳ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಯಾರೇ ತಪ್ಪಿತಸ್ಥರಿದ್ರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಸಿಎಂಗೆ ಮನವಿ ಮಾಡಿದ್ದೇನೆ. ನನಗೆ ಘಟನೆ ಬಗ್ಗೆ ತಿಳಿದ ತಕ್ಷಣ ಸಿಎಂ ಭೇಟಿ ಮಾಡಿ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದೇನೆ. ಇಂತಹ ಘಟನೆ ಮರುಕಳಿಸದಂತೆ ಎಲ್ಲಾ ಜಿಲ್ಲೆಯಲ್ಲೂ ಎಚ್ಚರ ವಹಿಸುವಂತೆ ಒತ್ತಾಯಿಸುತ್ತೇನೆ.
ನಾನು ಸರ್ಕಾರಕ್ಕೆ ಸಾಕಷ್ಟು ಸಲಹೆ ನೀಡಿದ್ದೆ, ಅದರಲ್ಲಿ ಕೆಲವನ್ನು ಈಡೇರಿಸಿದ್ದಾರೆ. ಏಕಾಏಕಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ನಿಧಾನವಾಗಿ ಪ್ರಕರಣ ಹೆಚ್ಚಾಗಿದ್ದರೆ ವ್ಯವಸ್ಥೆ ಮಾಡಬಹುದಿತ್ತು. ಈ ಸಂದರ್ಭದಲ್ಲಿ ದೂರಿಕೊಂಡು ಕೂರುವುದು ಸರಿಯಲ್ಲ ಎಂದರು.