ಬಿಬಿಎಂಪಿ ಕರ್ಮಕಾಂಡ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ : ಕೋವಿಡ್ ರೋಗಿಗಳ ಹಾಸಿಗೆ ಹಂಚಿಕೆಯಲ್ಲಿ ಭಾರಿ ಅವ್ಯವಹಾರ | ಜನತಾ ನ್ಯೂಸ್
ಬೆಂಗಳೂರು : ಕೋವಿಡ್-19 ಸಮಯದಲ್ಲಿ ಸಾವಿನ ಮನೆಯಾಗುತ್ತಿರುವ ಬೆಂಗಳೂರಿನಲ್ಲಿ ಬೆಡ್ ಬುಕಿಂಗ್ ದಂಧೆ ನಡೆಸುತ್ತಿರುವ ಬಿಬಿಎಂಪಿ ಅಧಿಕಾರಿಗಳ ಕರ್ಮಕಾಂಡವನ್ನು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಬಯಲಿಗೆ ಎಳೆದಿದ್ದಾರೆ.
ಬೆಂಗಳೂರು ನಗರದಲ್ಲಿ ಸಾಕಷ್ಟು ಹಾಸಿಗೆಗಳಿವೆ, ಆದರೆ ಯುದ್ಧ ಕೊಠಡಿ ಸಿಬ್ಬಂದಿಗಳು ಸುಳ್ಳು ಹಾಸಿಗೆ ಬುಕಿಂಗ್ ದಂಧೆಯನ್ನು ನಡೆಸುತ್ತಿದ್ದಾರೆ ಮತ್ತು ನಂತರ ಅವರಿಗೆ ಇಷ್ಟವಾದವರಿಗೆ ಹಂಚಿಕೆ ಮಾಡುತ್ತಿರುವುದರಿಂದ ಅವುಗಳಲ್ಲಿ ಯಾವುದೂ ಜನರಿಗೆ ಲಭ್ಯವಾಗುತ್ತಿಲ್ಲ, ಎಂದು ಸಂಸದ ತೇಜಸ್ವಿ ಸೂರ್ಯ ಇಂದು ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಕೋಪಗೊಂಡ ಸೂರ್ಯ ಈ ದಂಧೆಯಲ್ಲಿ ಭಾಗಿಯಾಗಿರುವವರು ಕೊಲೆಗಾರರು ಎಂದು ಕಿಡಿಕಾರಿದ್ದು, ಖಂಡಿತವಾಗಿಯೂ ಇಂತವರು ಹುಳಬಿದ್ದು ಸಾಯುತ್ತಾರೆ, ಎಂದು ಹೇಳಿದ್ದಾರೆ. ಏಕೆಂದರೆ ಅವರು ಸಾಕಷ್ಟು ಲಭ್ಯವಿದ್ದರೂ ಹಾಸಿಗೆಗಳು ಸಿಗದೇ ಮರಣ ಹೊಂದಿದ ನೂರಾರು ಜನರ ಜೀವನದೊಂದಿಗೆ ಅವರು ಆಡಿದ್ದಾರೆ, ಎಂದಿದ್ದಾರೆ.
ವಿವಿಧ ಆಸ್ಪತ್ರೆಗಳಲ್ಲಿ ಬೀಡುಬಿಟ್ಟಿರುವ ಆರೋಗ ಮಿತ್ರಗಳು, ವಾರ್ ರೂಂ ನಿರ್ವಹಿಸುತ್ತಿರುವ ಏಜೆನ್ಸಿಯ ಸಿಬ್ಬಂದಿಗಳು, ಕೆಲವು ಬಿಬಿಎಂಪಿ ಅಧಿಕಾರಿಗಳು, ಜನರ ಜೀವದ ಜೊತೆ ಆಟವಾಡಿದ ಮತ್ತು ಬೆಂಗಳೂರಿನಲ್ಲಿ ಈ ಹಾಸಿಗೆಗಳ ನಕಲಿ ಕೊರತೆಗೆ ಕಾರಣವಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಹಾಸಿಗೆಯ ವಿತರಣೆ, ಕಾರ್ಯವಿಧಾನ, ಪ್ರೋಟೋಕಾಲ್, ಬುಕಿಂಗ್ ಸಮಯಕ್ಕೆ ಸಂಬಂಧಿಸಿದ 10,000 ಕ್ಕೂ ಹೆಚ್ಚು ರೋಗಿಗಳನ್ನು ಒಳಗೊಂಡ ಡೇಟಾವನ್ನು ತನಿಖೆ ಮಾಡಿರುವುದಾಗಿ ಸೂರ್ಯ ಹೇಳಿದರು, ಮನೆಯಲ್ಲಿ ಪ್ರತ್ಯೇಕತೆಯಲ್ಲಿದ್ದ ರೋಗಿಗಳ ಹೆಸರುಗಳನ್ನು ಬಳಸಿ ಹಾಸಿಗೆಗಳನ್ನು ಬುಕ್ ಮಾಡಲಾಗುತ್ತಿದೆ ಮತ್ತು ಹಾಸಿಗೆ ಬೇಡಿಕೆಯಿಟ್ಟವರಿಗೆ 50 ಸಾವಿರ ರೂಪಾಯಿಗಳ ವರೆಗೆ ಹಣ ಪಡೆದು ಮರುಹಂಚಿಕೆ ಮಾಡಲಾಗಿದೆ, ಎಂದು ಹೇಳಿದ್ದಾರೆ. ಶಾಸಕರಾದ ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಮತ್ತು ರವಿ ಸುಬ್ರಮಣ್ಯ ಅವರು ಸಂಸದರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಇಂತಹ ಭ್ರಷ್ಟ ಪದ್ಧತಿಗಳಿಂದ ಪ್ರಾಣ ಕಳೆದುಕೊಂಡ ಎಲ್ಲರಿಗೂ ಕ್ಷಮೆಯಾಚಿಸಿದ ಸಂಸದರು, ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರ ಗಮನಕ್ಕೆ ಈ ವಿಷಯ ತಂದಿದ್ದು, ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ, ಎಂದು ತಿಳಿಸಿದ್ದಾರೆ.
ಇದಲ್ಲದೇ, ಈ ಅಂಕಿಅಂಶಗಳನ್ನು ಸಂಸದನಾದ ನನಗೆ ನೀಡಲು ಅಧಿಕಾರಿಗಳು ನೀಡಲು ನಿರಾಕರಿಸಿದ್ದು, ಭಾರಿ ಹರಸಾಹಸ ಪಡುವುದರ ಮೂಲಕ ಈ ಮಾಹಿತಿ ಗಳಿಸಿರುವುದಾಗಿ, ಸಂಸದರು ಹೇಳಿದ್ದಾರೆ.