ಹುಬ್ಬಳ್ಳಿ: ಐಸಿಯುನಲ್ಲಿ ದುರಂತ, 5 ಕೊರೋನಾ ರೋಗಿಗಳ ಸಾವು! | ಜನತಾ ನ್ಯೂಸ್
ಹುಬ್ಬಳ್ಳಿ : ಲೈಫ್ಲೈನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಕೊರೋನಾ ಸೋಂಕಿತರು ಏಕಕಾಲಕ್ಕೆ ಮೃತಪಟ್ಟಿದ್ದಾರೆ.
ಸೋಂಕಿತರ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ ಎನ್ನುವುದನ್ನು ತಳ್ಳಿಹಾಕಿರುವ ಜಿಲ್ಲಾಡಳಿತ, ಆಕ್ಸಿಜನ್ ಕೊರತೆಯಿಂದ ಸೋಂಕಿತರು ಮೃತಪಟ್ಟಿಲ್ಲ. ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವೇ ಇದೆ. ತನಿಖೆ ನಂತರವೇ ನೈಜವಾದ ಕಾರಣ ಗೊತ್ತಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಜಿಪಂ ಹಾಗೂ ಪಾಲಿಕೆ ಮಾಜಿ ಸದಸ್ಯ, ನವಲಗುಂದ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ದೇಸಾಯಿಗೌಡ ಪಾಟೀಲ, ಕೇಶ್ವಾಪುರ ನಿವಾಸಿ ವಾಣಿ ಜನ್ನು, ಶಿರಸಿ ನಿವಾಸಿ ವಿನಯಾ, ಹುಬ್ಬಳ್ಳಿ ನಿವಾಸಿಗಳಾದ ಬಾಲಚಂದ್ರ, ಸುಶಾಂತ ದ್ರೋಣಾವತ್ತ ಮೃತಪಟ್ಟವರು. ಇವರಲ್ಲಿ ದೇಸಾಯಿಗೌಡ ಪಾಟೀಲ ಅವರು ಮಾಜಿ ಶಾಸಕ ಶಂಕರಗೌಡ ಪಾಟೀಲ ಅವರ ಹಿರಿಯ ಪುತ್ರರಾಗಿದ್ದಾರೆ.
ಐಸಿಯುನಲ್ಲಿರುವ ಐವರು ಸೋಂಕಿತರು ಕೆಲವೇ ನಿಮಿಷಗಳ ಅಂತರದಲ್ಲಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯುಂಟಾಗಿತ್ತು. ಈ ಕಾರಣದಿಂದಾಗಿಯೇ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.