ಕೋವಿಡ್ ಬೆಡ್ ಬ್ಲಾಕಿಂಗ್ ಹಗರಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ | ಜನತಾ ನ್ಯೂಸ್
ಬೆಂಗಳೂರು : ಕೋವಿಡ್ ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಒಂದೇ ಕೋಮಿನ 17 ಮಂದಿಯ ಹೆಸರನ್ನು ಲೈವ್ ನಲ್ಲಿ ತೇಜಸ್ವಿ ಸೂರ್ಯ ಓದಿದರೆ, ಇವರನ್ನಾ ಬಿಬಿಎಂಪಿಗೆ ನೇಮಕ ಮಾಡಿದ್ದೀರಾ ಅಥವಾ ಮದರಸಕ್ಕೆ ನೇಮಕ ಮಾಡಿದ್ದೀರಾ ಎಂದು ರವಿಸುಬ್ರಹ್ಮಣ್ಯ ಅಧಿಕಾರಿಗಳ ವಿರುದ್ಧ ಗುಡುಗಿದ್ದರು.
ಅವರ ಪಕ್ಕದಲ್ಲಿಯೇ ಸತೀಶ್ ರೆಡ್ಡಿ ಕೂಡಾ ಕೂಗಾಡುವ ದೃಶ್ಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಶಾಸಕ ಸತೀಶ್ ರೆಡ್ಡಿ ಅವರೇ ಈ ಹಗರಣದ ಹಿಂದಿರುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್, ಸತ್ಯ ಈಗ ಹೊರಗಡೆ ಬಂದಿದೆ. ಬಿಜೆಪಿ ನಾಯಕರು ಈ ಹಗರಣದ ಹಿಂದಿರುವುದಾಗಿ ಟ್ವೀಟ್ ಮಾಡಿದೆ.
ಬೆಂಬಲಿಗರೊಂದಿಗೆ ಬೆಡ್ ಬ್ಲಾಕಿಂಗ್ ಹಗರಣ ನಡೆಸುತ್ತಿರುವ ಸತೀಶ್ ರೆಡ್ಡಿ ಅವರನ್ನು ಬಂಧಿಸಬೇಕು. ಅವರೊಂದಿಗೆ ತೇಜಸ್ವಿ ಸೂರ್ಯ ಅವರನ್ನು ಬಂಧಿಸಬೇಕು. ಅಲ್ಲದೇ ಸಮಗ್ರ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ಮಧ್ಯೆ ತೇಜಸ್ವಿ ಸೂರ್ಯ ವಿರುದ್ಧ ಮುಗಿ ಬಿದ್ದಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಸೆಕ್ಯೂಲರಿಸಂ ಅಪಾಯಕಾರಿಯಲ್ಲಿದೆ. ರಾಜ್ಯ ಕಾಂಗ್ರೆಸ್ ನಾಯಕರ ಚಿಂತನೆ ಹಾಗೂ ಕ್ರಿಯೆಯಲ್ಲಿ ದಿವಾಳಿತ ವಿದೆ ಎಂದು ಅವರು ಹೇಳಿದ್ದಾರೆ.
ಇದರ ನಡುವೆ ವಾರ್ ರೊಂನಲ್ಲಿ ನಮ್ಮೊಂದಿಗೆ ಇತರ 214 ಮಂದಿಯನ್ನು ಏಜೆನ್ಸಿಯೊಂದು ನೇಮಕ ಮಾಡಿತ್ತು ಎಂದು ಆರೋಪಕ್ಕೊಳಗಾದವರು ಹೇಳಿದ್ದಾರೆ. ಜಾತಿ, ಧರ್ಮ ಎಂಬುದನ್ನು ಪರಿಗಣಿಸದೆ ನೇಮಕ ಮಾಡಿರುವುದಾಗಿ ಏಜೆನ್ಸಿಯ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ.