₹360 ಕೋಟಿ ಲೋನ್ ಕೊಡಿಸ್ತೀನಿ ಅಂತಾ ಉದ್ಯಮಿಗೆ ಉಂಡೆನಾಮ ಹಾಕಿದ್ದ ಖದೀಮ ಅರೆಸ್ಟ್ | ಜನತಾ ನ್ಯೂಸ್
ಬೆಂಗಳೂರು : ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಲೋನ್ ಕೊಡಿಸುವ ಸೋಗಿನಲ್ಲಿ ಕೊಟ್ಯಂತರ ರೂ. ಪಡೆದು ವಂಚಿಸುತ್ತಿದ್ದ ಅಂತಾರಾಜ್ಯ ವಂಚಕನನ್ನು ಸಿಸಿಬಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ತಿರುನಲ್ವೇಲಿ ಜಿಲ್ಲೆಯ ಎ. ಹರಿನಾಡರ್ ಅಲಿಯಾಸ್ ಹರಿ ಗೋಪಾಲಕೃಷ್ಣ ನಾಡರ್ ಬಂಧಿತ ಆರೋಪಿ.
ಈತನಿಂದ 3893 ಗ್ರಾಂ ಚಿನ್ನಾಭರಣ, 8 ಲಕ್ಷ ರೂ. ನಗದು, ಇನ್ನೋವಾ ಕ್ರಿಸ್ಟಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ, ಆಂಧ್ರ ಪ್ರದೇಶ ತಮಿಳುನಾಡು, ಕೇರಳದಲ್ಲಿ ಉದ್ಯಮಿಗಳಿಗೆ ಬ್ಯಾಂಕ್ ಲೋನ್ ಕೊಡಿಸುವ ನೆಪದಲ್ಲಿ ಸಾಕಷ್ಟು ಮಂದಿಗೆ ವಂಚನೆ ಮಾಡಿರುವುದು ಸಿಸಿಬಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಹರಿನಾಡರ್, ರಂಜಿತ್ ಹಾಗೂ ಸಹಚರರು ವ್ಯವಸ್ಥಿತ ಸಂಚು ರೂಪಿಸಿಕೊಂಡು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಗುಜರಾತ್ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಲೋನ್ ಕೊಡಿಸುವುದಾಗಿ ವಂಚಿಸುತ್ತಿದ್ದರು.
ಬೆಂಗಳೂರಿನ ಉದ್ಯಮಿ ವೆಂಕಟರಮಣಿ ಶಾಸ್ತ್ರಿ ಅವರನ್ನು ಸಂಪರ್ಕಿಸಿದ ವಂಚಕರ ಗ್ಯಾಂಗ್ ಶೇ. 6 ಬಡ್ಡಿದರದಲ್ಲಿ 360 ಕೋಟಿ ರೂ. ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದರು. ದೀರ್ಘಕಾಲದ ಮಾತುಕತೆ ನಂತರ ಕೇರಳದ ಪಂಚತಾರ ಹೋಟೆಲ್ವೊಂದಕ್ಕೆ ಕರೆಯಿಸಿಕೊಂಡು ಸಾಲ ಕೊಡಿಸುವುದಾಗಿ ಪುಸಲಾಯಿಸಿದ್ದರು.
ಇದರಂತೆ ಒಪ್ಪಿಕೊಂಡ ಉದ್ಯಮಿಗೆ ಕೆಲ ದಿನಗಳ ಬಳಿಕ 360 ಕೋಟಿ ರೂ. ಬೆಲೆಯ ನಕಲಿ ಡಿಮ್ಯಾಂಡ್ ಡ್ರಾಪ್ಟ್ (ಡಿಡಿ) ತೋರಿಸಿ ಲೋನ್ ಮಂಜೂರಾಗಿದೆ ಎಂದು ನಂಬಿಸಿದ್ದಾರೆ. ಬಳಿಕ ಲೋನ್ ಸರ್ವಿಸ್ ಚಾರ್ಜ್ ಮೊತ್ತದ ಶೇ. 2 ರಷ್ಟು ಅಂದರೆ 7.20 ಕೋಟಿ ರೂ. ಹಣ ಪಡೆದಿದ್ದಾರೆ.
ಹಣ ನೀಡಿ ಕೆಲ ದಿನಗಳ ಬಳಿಕ ಲೋನ್ ಕೊಡಿಸದೆ ಅಸಲು ಹಣ ನೀಡದೆ ಯಾಮಾರಿಸಿದ್ದಾರೆ. ಹಣ ಕೇಳಿದರೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್ ಠಾಣೆಗೆ ಉದ್ಯಮಿ ವೆಂಕಟರಮಣ ದೂರು ನೀಡಿದ್ದರು.
ಪ್ರಕರಣ ಸಿಸಿಬಿಗೆ ಹಸ್ತಾಂತರಿಸಿದ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಇತರೆ ಆರೋಪಿಗಳ ಶೋಧ ಮುಂದುವರೆಸಿದ್ದು, ಇವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಹರಿನಾಡರ್ ಹಾಗೂ ಸಹಚರರು ಇದೇ ರೀತಿ ಕರ್ನಾಟಕ, ಆಂಧ್ರಪ್ರದೇಶ , ತಮಿಳುನಾಡು, ಕೇರಳ, ಮಹಾರಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಬ್ಯುಸಿನೆಸ್ಮೆನ್ಗಳಿಗೆ ವಂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಹರಿನಾಡರ್ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತಷ್ಟು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.