ಹಸೆಮಣೆ ಏರಬೇಕಿದ್ದ ಯುವತಿ ಕೊರೊನಾಗೆ ಬಲಿ! | ಜನತಾ ನ್ಯೂಸ್
ವಿಜಯಪುರ : ಮೇ.23 ರಂದು ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿರಿಸಬೇಕಿದ್ದ ಮುದ್ದೇಬಿಹಾಳ ಪಟ್ಟಣದ ಯುವತಿ ಕೋವಿಡ್ ಸೋಂಕಿಗೆ ಬಲಿಯಾಗಿರುವ ಘಟನೆ ನಡೆದಿದೆ.
ಪಟ್ಟಣದ ವಿಬಿಸಿ ಹೈಸ್ಕೂಲ್ ಶಿಕ್ಷಕ ಸುಭಾಷ ಐಹೊಳ್ಳಿ ಅವರ ಪುತ್ರಿ ಶ್ರುತಿ ಐಹೊಳ್ಳಿ (24) ಕೋವಿಡ್ ಸೋಂಕಿಗೆ ಬಲಿಯಾದವರು. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಮೇ 23 ರಂದು ಶ್ರುತಿ ವಿವಾಹ ನಿಶ್ಚಯವಾಗಿತ್ತು. ಬಿಎಸ್ಸಿ, ಬಿಎಡ್ ಪದವೀಧರೆಯಾಗಿದ್ದ ಶ್ರುತಿ ಗಣಿತ ವಿಷಯದಲ್ಲಿ ಪಾಂಡಿತ್ಯ ಹೊಂದಿದ್ದರು. ಮುದ್ದೇಬಿಹಾಳ ಕೆಪಿಬಿಎಂಪಿಎಸ್ ಶಾಲೆಯಲ್ಲಿ ಎರಡು ವರ್ಷಗಳ ಕಾಲ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ ಕೊರೊನಾ ಕಾರಣದಿಂದ ಬಾಗಲಕೋಟೆ ಜಿಲ್ಲೆಯ ಗ್ರಾಮವೊಂದರ ಭಾವನ ಮನೆಯಲ್ಲಿ ಶ್ರುತಿ ಹಾಗೂ ಪೋಷಕರು ತಂಗ್ಗಿದ್ದರು.
ಶ್ರುತಿಗೆ ಯಾವುದೇ ಕೊರೊನಾ ಲಕ್ಷಣಗಳು ಕಂಡು ಬಂದಿರಲಿಲ್ಲ. ಕಫ ಕಟ್ಟಿದ ಹಿನ್ನೆಲೆಯಲ್ಲಿ ಉಸಿರಾಟದ ತೊಂದರೆಯಾಗಿ ಕೊನೆ ಕ್ಷಣದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.