20 ಮಂದಿ ಕೊರೊನಾ ಸೋಂಕಿತರ ಪ್ರಾಣ ಉಳಿಸಿದ ಶಾಸಕ ರೇಣುಕಾಚಾರ್ಯ! | ಜನತಾ ನ್ಯೂಸ್
ದಾವಣಗೆರೆ : ದಾವಣಗೆರೆ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಹೊನ್ನಾಳಿ ತಾಲೂಕಿನ ಆಸ್ಪತ್ರೆಯಲ್ಲಿ 20 ಜನರು ಆಕ್ಸಿಜನ್ ಕೊರತೆಯಿಂದ ಜೀವನ್ಮರಣ ಹೊರಟ ನಡೆಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ 20 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. 3 ಗಂಟೆಗೆ ಆಗುವಷ್ಟು ಮಾತ್ರ ಆಕ್ಸಿಜನ್ ಉಳಿದಿತ್ತು. ಆಸ್ಪತ್ರೆ ಸಿಬ್ಬಂದಿಗಳಿಗೆ ಇನ್ನೂ ಕೆಲವು ಗಂಟೆಗಳಲ್ಲಿ ಆಕ್ಸಿಜನ್ ಖಾಲಿ ಆಗುತ್ತದೆ ಅಂತ ಗೊತ್ತಾದ ತಕ್ಷಣ, ಆಸ್ಪತ್ರೆ ಅಧಿಕಾರಿಗಳು ಶಾಸಕರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಶಾಸಕರು ಹಾಗೂ ಅಧಿಕಾರಿಗಳ ತಂಡ ಖುದ್ದು ಆಕ್ಸಿಜನ್ ಘಟಕಕ್ಕೆ ತೆರಳಿ ಆಕ್ಸಿಜನ್ ಸಿಲಿಂಡರ್ ತಂದು ಸೋಂಕಿತರ ಪಾಲಿಗೆ ಸಂಜೀವಿನಿಯಾಗಿದ್ದಾರೆ. ಅಧಿಕಾರಿಗಳೊಂದಿಗೆ ಹರಿಹರದ ದಿ ಸದರನ್ ಗ್ಯಾಸ್ ಲಿಮಿಟೆಡ್ ನ ಆಕ್ಸಿಜನ್ ಘಟಕಕ್ಕೆ ಆಗಮಿಸಿದ ಶಾಸಕರು, 16 ಆಕ್ಸಿಜನ್ ಸಿಲಿಂಡರ್ ತುಂಬಿಸಿಕೊಂಡು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ 20 ಮಂದಿ ರೋಗಿಗಳ ಪ್ರಾಣ ಉಳಿಸಿದ್ದಾರೆ.
ಬಳಿಕ ಪಿಪಿಇ ಕಿಟ್ ಧರಿಸಿ ವೆಂಟಿಲೇಟರ್ ವಾರ್ಡಿಗೆ ಶಾಸಕರು ಭೇಟಿ ನೀಡಿದ್ದಾರೆ. ಅಲ್ಲದೆ ಆಸ್ಪತ್ರೆಯ ಆಕ್ಸಿಜನ್ ಬೆಡ್ನಲ್ಲಿ 20 ಮಂದಿಯ ಆರೋಗ್ಯ ವಿಚಾರಿಸಿ ಧೈರ್ಯ ತುಂಬುವ ಕೆಲಸ ಮಾಡಿದರು.
ಶಾಸಕರ ಹಾಗೂ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಆಗಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಶಾಸಕರ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.