ಲಾಕ್ಡೌನ್ ಬಳಿಕ ಸೋಂಕು ಪ್ರಕರಣಗಳಲ್ಲಿ ಇಳಿಕೆ: ಸಿಎಂ ಯಡಿಯೂರಪ್ಪ | ಜನತಾ ನ್ಯೂಸ್
ಬೆಂಗಳೂರು : ಬೆಂಗಳೂರು ಮತ್ತು ರಾಜ್ಯದಲ್ಲಿ ನಿರ್ಬಂಧಗಳು ಜಾರಿಯಾದ ನಂತರ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ಮೇ 10 ರಿಂದ ಕಠಿಣ ಕ್ರಮ ಜಾರಿ ಮಾಡಲಾಗಿದೆ. ಏಪ್ರಿಲ್ 24 ರಿಂದ ಕೆಲವು ನಿರ್ಬಂಧ ಹೇರಲಾಗಿತ್ತು. ಮೇ 10 ರಿಂದ ಕಠಿಣ ಕ್ರಮ ಜಾರಿ ಮಾಡಲಾಗಿದೆ. ಮೇ 5 ರಂದು 50,112 ಕೇಸ್ ದಾಖಲಾಗಿತ್ತು, ಕಠಿಣ ಕ್ರಮದಿಂದ ನಿನ್ನೆ ರಾಜ್ಯದಲ್ಲಿ 39,900 ಕೇಸ್ ದಾಖಲಾಗಿ ಇಳಿಕೆ ಕಂಡಿದೆ. ಇದು ಸಮಾಧಾನ ಸಂಗತಿಯಾಗಿದ್ದು, ಲಾಕ್ಡೌನ್ ನಿಂದ ಈ ಪರಿಸ್ಥಿತಿ ಬಂದಿದೆ. ಪರಿಸ್ಥಿತಿ ಸುಧಾರಿಸುತ್ತಿದೆ ಎಂದರು.
ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಐಸಿಯು ಬೆಡ್, ಆಕ್ಸಿಜನ್ ಬೆಡ್, ವೆಂಟಿಲೇಟರ್ ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ 1970 ಆಕ್ಸಿನೇಟೆಡ್ ಬೆಡ್ಗಳು, 444 ಐಸಿಯುಗಳು, 676 ವೆಂಟಿಲೇಟರ್ ಗಳಿದ್ದವು.
ಪ್ರಸ್ತುತ 24000 ಆಕ್ಸಿನೇಟೆಡ್ ಬೆಡ್ಗಳು, 1185 ಐಸಿಯು ಬೆಡ್ಗಳು 2019 ವೆಂಟಿಲೇಟರ್ಗಳಿವೆ. ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ 4700 ರಿಂದ 9708 ಕ್ಕೆ ಹೆಚ್ಚಿಸಲಾಗಿದೆ. ವೆಂಟಿಲೇಟರ್ 348 ರಿಂದ 646 ಕ್ಕೆ ಹೆಚ್ಚಿಸಲಾಗಿದೆ.
ಆಸ್ಪತ್ರೆಗಳ ಮೂಲ ಸೌಕರ್ಯ ಹೆಚ್ಚಿಸುವ ಕಾರ್ಯ ಮುಂದುವರೆದಿದೆ. ವೆಂಟಿಲೇಟರ್ ಹಾಗೂ ಇತರ ಸೌಲಭ್ಯ ನಿರಂತರವಾಗಿ ಹೆಚ್ಚಳವಾಗುತ್ತಿವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಖಾಸಗಿ ವೈದ್ಯಕೀಯ ಕಾಲೇಜುಗಳು ಆಕ್ಸಿಜನ್ ಬೆಡ್ಗಳನ್ನು ಹೆಚ್ಚಿಸಲು ಹಾಗೂ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡುತ್ತಿದ್ದೇವೆ. ಇಂತಹ ಆಸ್ಪತ್ರೆಗಳಿಗೆ ಸರ್ಕಾರ ಶೇ. 70ರ ಸಹಾಯ ಧನ ನೀಡಲಿದ್ದು, ಉಳಿದ ಶೇ. 30ರ ಮೊತ್ತವನ್ನು ಆಯಾ ಆಸ್ಪತ್ರೆಗಳು ಭರಿಸಬೇಕು.
ರಾಜ್ಯದಿಂದ ಮೂರು ಕೋಟಿ ಲಸಿಕೆಗೆ ಆದೇಶ ನೀಡಲಾಗಿದೆ. ಎರಡು ಕೋಟಿ ಕೋವಿಶೀಲ್ಡ್ ಮತ್ತು ಒಂದು ಕೋಟಿ ಕೋವ್ಯಾಕ್ಸಿನ್ ಖರೀದಿಗೆ ಆದೇಶ ನೀಡಲಾಗಿದೆ. ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಹಾಗಾಗಿ 18ರಿಂದ 44 ವರ್ಷದವರಿಗೆ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.