ಲಾಕ್ ಡೌನ್ ನಿಂದಾಗಿ ಸಿಕ್ಕಿಬಿದ್ದ ಶ್ರೀಮಂತರರ ಮನೆ ದೋಚುತ್ತಿದ್ದ ನೇಪಾಳಿ ಗ್ಯಾಂಗ್! | ಜನತಾ ನ್ಯೂಸ್
ಬೆಂಗಳೂರು : ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡು ಶ್ರೀಮಂತರ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ನೇಪಾಳಿ ಗ್ಯಾಂಗ್ ಅನ್ನು ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಜೆ ಹಳ್ಳಿ ಪೊಲೀಸರಿಂದ ನೇಪಾಳಿ ಗ್ಯಾಂಗ್ ಅರೆಸ್ಟ್ ಆಗಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಇವರು ಸಿಕ್ಕಿಬಿದ್ದಿದ್ದಾರೆ.
ಶ್ರೀಮಂತರ ಮನೆಯನ್ನೇ ಗುರಿ ಮಾಡಿಕೊಂಡು ಈ ಗ್ಯಾಂಗ್ ಕಳ್ಳತನಕ್ಕೆ ಇಳಿಯುತ್ತಿತ್ತು. ಈಚೆಗೆ ಬೆಂಗಳೂರಿನ ಡಿಜೆ ಹಳ್ಳಿಯ ಎಂಎಂ ಲೇಔಟ್ನಲ್ಲಿ ಇರುವ ಆರ್ಮಿ ಆಫೀಸರ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಲಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಮಗಳ ಮನೆಗೆ ಈ ಮನೆಯ ಮಾಲೀಕರು ಹೋಗಿದ್ದರು.
ನೇಪಾಳ ಮೂಲದ ಬಾಗಲೂರು ನಿವಾಸಿಗಳಾದ ಮನೋಜ್ ಮಾಸಿ (37), ಕೇಶವರಾಜ್ ಭಟ್ (56), ಪ್ರಕಾಶ್ ಬಹದ್ದೂರ್ (23), ವಿಕ್ರಂ ಸಿಂಗ್ (36) ಬಂಧಿತರು.
ಆರೋಪಿಗಳಿಂದ 221 ಗ್ರಾಂ ಚಿನ್ನಾಭರಣ , 13 ಗ್ರಾಂ ವಜ್ರದ ಕಲ್ಲಿನ ಆಭರಣಗಳು, 500 ಗ್ರಾಂ ಬೆಳ್ಳಿಯ ಆಭರಣ ಸೇರಿ 75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಡಿಜೆಹಳ್ಳಿಯ ಎಂಎಂ ಲೇಔಟ್ನ ನಿವಾಸಿ ಭಾರತೀಯ ಸೇನೆಯ ಅಧಿಕಾರಿ ಪ್ರೇಮ್ ಕೃಷ್ಣದಾಸ್ ಕಪೂರ್ ಅವರ ಪತ್ನಿ ಅಲ್ಗಾ ಕಪೂರ್ ಕರೊನಾ ಭೀತಿಯಿಂದ ಏ.3ರಂದು ಮನೆಗೆ ಬೀಗ ಹಾಕಿ ರಾಜನಕುಂಟೆಯಲ್ಲಿರುವ ಮಗಳ ಮನೆಗೆ ತೆರಳಿದ್ದರು. ಏ.9ರಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾ-ಪಿಲ್ಲಿಯಾಗಿತ್ತು.
ಕಳ್ಳರು ಬೆಡ್ರೂಮ್ನ ಕಿಟಕಿಯ ಗ್ರಿಲ್ ಮುರಿದು ಮನೆಯೊಳಗೆ ಪ್ರವೇಶಿಸಿ ಲಾಕರ್ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, 1 ಸಾವಿರ ರೂ. ಲಂಡನ್ ಪೌಂಡ್ಸ್, ಯುಎಸ್ ಡಾಲರ್ ಸೇರಿ ಒಟ್ಟು 70 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿತ್ತು. ಕೂಡಲೇ ಅಲ್ಗಾ ಅವರು ಸೊಸೆ ಪೂಜಾ ಕಪೂರ್ಗೆ ಈ ಕುರಿತು ಮಾಹಿತಿ ನೀಡಿದ್ದರು. ಪೂಜಾ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು.
ಪಕ್ಕದ ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನೇಪಾಳಿ ಗ್ಯಾಂಗ್ ಈ ಕೃತ್ಯ ಎಸಗಿತ್ತು. ಆದರೆ ಅದೇ ವೇಳೆಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದ್ದರಿಂದ ಆಭರಣಗಳನ್ನು ನೇಪಾಳಕ್ಕೆ ತೆಗೆದುಕೊಂಡು ಹೋಗಲು ಆಗಲಿಲ್ಲ.
ಮೂವರು ಆರೋಪಿಗಳು ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರೆ, ವಿಕ್ರಮ್ ನೇಪಾಳಕ್ಕೆ ಹೊರಟಿದ್ದ. ಮುಂಬೈನಿಂದ ನೇಪಾಳಕ್ಕೆ ಹೋಗುವ ಮಾರ್ಗದಲ್ಲಿ ಈತನನ್ನು ಬಂಧಿಸಲಾಗಿದೆ. ಆರೋಪಿಗಳು ನಗರದಲ್ಲಿ ಸೆಕ್ಯೂರಿಟಿಗಾರ್ಡ್ ಕೆಲಸ ಮಾಡುತ್ತಿದ್ದು, ಯಾರೂ ವಾಸವಿಲ್ಲದ ಶ್ರೀಮಂತರ ಮನೆಯನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.