ವರದಕ್ಷಿಣೆ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ: ಅನುಮಾನಾಸ್ಪದವಾಗಿ ಪತ್ನಿ ಸತ್ತ 5 ದಿನಕ್ಕೆ ಸಾವಿನ ಮನೆಯ ಕದ ತಟ್ಟಿದ ಟೆಕ್ಕಿ! | ಜನತಾ ನ್ಯೂಸ್
ಮೈಸೂರು : ಮನೆಯಲ್ಲಿ ಅನುಮಾನಾಸ್ಪದವಾಗಿ ಪತ್ನಿ ಸತ್ತ ಐದೇ ದಿನಕ್ಕೇ ಗಂಡ ಜೈಲಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ಸಂಭವಿಸಿದೆ.
ನಗರದ ಶ್ರೀರಾಂಪುರ ಎಸ್ಬಿಎಂ ಕಾಲನಿ ನಿವಾಸಿಗಳಾದ ಆಶಾರಾಣಿ (28) ಮತ್ತು ಪ್ರದೀಪ್ ಕುಮಾರ್ (33) ಮೃತ ದುರ್ದೈವಿಗಳು.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಪ್ರದೀಪ್ ಕುಮಾರ್ ಜತೆ ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ಆಶಾರಾಣಿಗೆ ಕಳೆದ ತಿಂಗಳು ಮದುವೆ ಆಗಿತ್ತು. ಈ ದಂಪತಿ ಮೈಸೂರಿನಲ್ಲಿ ವಾಸವಿದ್ದರು. ಮೇ 8ರಂದು ನೇಣುಬಿಗಿದ ಸ್ಥಿತಿಯಲ್ಲಿ ಆಶಾರಾಣಿ ಮೃತದೇಹ ಮನೆಯಲ್ಲಿ ಪತ್ತೆಯಾಗಿತ್ತು.
ಆಶಾರಾಣಿ ಪೋಷಕರು ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಅಳಿಯ ಪ್ರದೀಪ್ ಕುಮಾರ್ ಹಾಗೂ ಈತನ ತಾಯಿ ಸರೋಜ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೈಲಾಸಪುರಂನಲ್ಲಿರುವ ತಾತ್ಕಾಲಿಕ ಕ್ವಾರಂಟೈನ್ ಕೇಂದ್ರದಲ್ಲಿದ್ದ ಪ್ರದೀಪ್ ಬೆಡ್ಶೀಟ್ನಿಂದ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪದಡಿ ಬಂಧಿತನಾಗಿದ್ದ ಈತನನ್ನು ಕೋವಿಡ್ ಇದ್ದ ಕಾರಣದಿಂದ ತಾತ್ಕಾಲಿಕ ಕೇಂದ್ರದಲ್ಲೇ ಇರಿಸಲಾಗಿತ್ತು.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ