ಕಾರ್ಯಕರ್ತರಿಗೆ, ಅಭಿಮಾನಿಗಳಲ್ಲಿ ಒಂದು ಮನವಿ: ಈ ಸಂಕಷ್ಟದಲ್ಲಿ ನನ್ನ ಹುಟ್ಟುಹಬ್ಬ ಆಚರಿಸುವುದು ಬೇಡ | ಜನತಾ ನ್ಯೂಸ್
ಬೆಂಗಳೂರು : ಇದೇ ತಿಂಗಳ 18ರಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಹುಟ್ಟುಹಬ್ಬ. ತಮ್ಮ ಜನ್ಮದಿನದಂದು ಸಡಗರ, ಸಂಭ್ರಮದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ಹೆಚ್ಡಿಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಬಹಿರಂಗ ಪತ್ರ ಬರೆದು ಮನವಿ ಮಾಡಿರುವ ಗೌಡರು, ಕೋವಿಡ್ ಸಂದರ್ಭದಲ್ಲಿ ನಾವು ಸಾಮಾಜಿಕ ಜವ್ದಾರಿ ಮತ್ತು ಮಾನವೀಯತೆ ತೋರಿಸಬೇಕು. ಮೇ 18ರಂದು ನನ್ನ ಹುಟ್ಟುಹಬ್ಬದಂದು ಹಾರ, ತುರಾಯಿ, ಕೇಕ್, ಸಿಹಿಗಾಗಿ ಅನಗತ್ಯ ದುಂದುವೆಚ್ಚ ಮಾಡುವ ಬದಲಿಗೆ ನಿಮ್ಮ ನಿಮ್ಮ ಭಾಗದ ಕೊರೊನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅವರ ಅಗತ್ಯಗಳ ಪೂರೈಕೆಗೆ ಬಳಸಿದರೆ, ಅದು ನಿಜಕ್ಕೂ ಸದುಪಯೋಗವಾಗಲಿದೆ ಎಂದಿದ್ದಾರೆ.
ಈಗ ನಾವು ನಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆಯನ್ನು ತೋರಿಸುವ ಸಮಯದಲ್ಲಿದ್ದೇವೆ. ಆದ್ದರಿಂದ ನನ್ನ ಹುಟ್ಟುಹಬ್ಬದ ನಿಮಿತ್ತ ನೀವು ಹಾರ, ತುರಾಯಿ, ಕೇಕ್, ಸಿಹಿ ಎಂದು ಅನಗತ್ಯವಾಗಿ ದುಂದುವೆಚ್ಚ ಮಾಡುವ ಬದಲಿಗೆ ಅದನ್ನೇ ನಿಮ್ಮ ನಿಮ್ಮ ಭಾಗದ ಕೊರೊನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅವರ ಅಗತ್ಯ ಪೂರೈಕೆಗೆ ಬಳಸಿದಲ್ಲಿ ಅದು ನಿಜಕ್ಕೂ ಸದುಪಯೋಗವಾಗುತ್ತದೆ. ದೇವರು ಮೆಚ್ಚುತ್ತಾನೆ. ನನ್ನ ಅಭಿಮಾನಿಗಳ ಸೇವಾ ಕಾರ್ಯ ನನಗೂ ಸಂತೋಷ ನೀಡುತ್ತದೆ ಎಂದು ದೇವೇಗೌಡರು ಪತ್ರದ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೇ 18ರಂದು ಅಭಿಮಾನಿಗಳು ಕಾರ್ಯಕರ್ತರು ಸಡಗರ, ಸಂಭ್ರಮದ ಕಾರ್ಯಕ್ರಮ ಹಮ್ಮಿಕೊಳ್ಳದೇ ರಾಜ್ಯದ ಜನರು ಕೊರೊನಾ ನೋವಿನಲ್ಲಿ ತತ್ತರಿಸುತ್ತಿರುವ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ನೀವು ಇದ್ದಲ್ಲಿಯೇ ನಿಮ್ಮ ಅಭಿಮಾನ, ಹಾರೈಕೆ ರೂಪದಲ್ಲಿ ವ್ಯಕ್ತವಾಗಲಿ ಎಂದು ಗೌಡರು ಮನವಿ ಮಾಡಿದ್ದಾರೆ.