ಕ್ಷಮೆ ಕೇಳಲಿ ಎಂದ ರೋಹಿಣಿ ಸಿಂಧೂರಿಗೆ ಪ್ರಶ್ನೆಗಳ ಸುರಿಮಳೆಗೈದ ಶಾಸಕ ಸಾರಾ ಮಹೇಶ್! | ಜನತಾ ನ್ಯೂಸ್
ಮೈಸೂರು : ನನ್ನ ಮೇಲೆ ಆರೋಪ ಮಾಡಿದವರು ಕ್ಷಮೆ ಕೇಳಬೇಕು ಎಂದು ರೋಹಿಣಿ ಸಿಂಧೂರಿ ನಿನ್ನೆ ಹೇಳಿಕೆ ನೀಡಿದ್ದ ಹಿನ್ನೆಲೆ ಸಾ.ರಾ ಮಹೇಶ್ ಡಿ.ಸಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹೇಶ್, ಒಬ್ಬ ಕನ್ನಡಿಗ ದಲಿತ ಡಿಸಿಯನ್ನು 28 ದಿನಕ್ಕೆ ವರ್ಗಾವಣೆ ಮಾಡಿಸಿದ್ದು ಸುಳ್ಳಾ? ನಿಮ್ಮ ಹಾಸನದ ಪ್ರಕರಣದಲ್ಲಿ ತಕ್ಷಣ ನಿಮ್ಮ ಪರ ತೀರ್ಪು ಬಂತು. ಈಗ ಅದರ ತೀರ್ಪು ಬರದಂತೆ ಸಿಎಟಿ ಮ್ಯಾನೇಜ್ ಮಾಡಿದ್ದು ಸುಳ್ಳ? ಎಂದು ಕೇಳಿದರು. ವಾಲ್ಮೀಕಿ ಜಯಂತಿ ಆಚರಣೆಗೆ ಬರಲಿಲ್ಲ. ಬದಲಾಗಿ ಬಂಡೀಪುರಕ್ಕೆ ಹೋಗಿದ್ದು ಸುಳ್ಳಾ? ಎಂದು ಪ್ರಶ್ನೆ ಮಾಡಿದರು.
ಮಾತ್ರೆ ಕೊಡಲು ದುಡ್ಡಿಲ್ಲ. ಕರೊನಾ ಸಂದರ್ಭದಲ್ಲಿ ಇನ್ ಡೋರ್ ಜಿಮ್, ಸ್ವಿಮ್ಮಿಂಗ್ ಪೂಲ್ ಕಟ್ಟಿಸಿರುವುದು ಸುಳ್ಳಾ? ಅದು ಪಾರಂಪರಿಕ ಕಟ್ಟಡದಲ್ಲಿ ಈಜುಕೊಳಕ್ಕೆ ಅನುಮತಿ ಕೊಟ್ಟವರು ಯಾರು? ಇದಕ್ಕೆ ಹಣ ಎಲ್ಲಿಂದ ಬಂತು? ಅದು ಕಟ್ಟಿರೋದು ಸುಳ್ಳಾ?
ರಾಜ್ಯದ ಸಿಎಂ ಮತ್ತು ರಾಷ್ಟ್ರದ ಪಿಎಂ ಮನೆಯಲ್ಲಿ ಈಜುಕೊಳ ಇದೆಯಾ? ರಾಜ್ಯ ಮುಖ್ಯ ಕಾರ್ಯದರ್ಶಿ ಮನೆಯಲ್ಲಿ ಇದೆಯಾ? ನಾವು-ನೀವು ಜನರಿಗೆ ಮಾದರಿಯಾಗಿರಬೇಕು ಎಂದು ಸಲಹೆ ನೀಡಿದರು.
ಕರ್ನಾಟಕದ ಹಣ ತಿರುಪತಿಗೆ ಕೊಟ್ಟಿದ್ದು ಸುಳ್ಳಾ? ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯ ಹೊತ್ತಿ ಉರಿದಿದ್ದು ಸುಳ್ಳಾ? ಈಜುಕೊಳದ 50 ಲಕ್ಷ ರೂ. ಕರೊನಾಗೆ ಬಳಸಬೇಕಿತ್ತು.
ನಿಮ್ಮನ್ನು ಯಾರೂ ಪ್ರಶ್ನೆ ಮಾಡಲೇಬಾರದ? ಇಂತಹ ಪರಿಸ್ಥಿತಿಯಲ್ಲೂ ಮೈಸೂರಿನಲ್ಲಿ ಶಾಸಕರು, ಪಾಲಿಕೆ ಸದಸ್ಯರು ಕೆಲಸ ಮಾಡುತ್ತಿರುವುದಕ್ಕೆ ಕೇಳಬೇಕಾ? ಇದಕ್ಕೆ ಸೂಕ್ತ ವೇದಿಕೆಯಲ್ಲಿ ತಕ್ಕ ಉತ್ತರ ನೀಡುವೆ ಎಂದು ಸವಾಲು ಎಸೆದರು.
ಇದಕ್ಕೆ ಸೂಕ್ತ ವೇದಿಕೆಯಲ್ಲಿ ತಕ್ಕ ಉತ್ತರ ನೀಡುವೆ. ಇದೆಲ್ಲಾ ಏನೇ ಇರಲಿ ನೊಂದವರ ನಿಟ್ಟುಸಿರು ತಟ್ಟದೆ ಬಿಡುವುದಿಲ್ಲ ಎಂದು ರೋಹಿಣಿ ಸಿಂಧೂರಿ ವಿರುದ್ದ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.
ಇದೇ ವೇಳೆ ಸಾಂಕ್ರಾಮಿಕ ಹೆಚ್ಚಳವಾಗ್ತಿರೊ ಬಗ್ಗೆ ಮಾತನಾಡಿದ ಮಹೇಶ್, ತಜ್ಞರು-ಮಾಧ್ಯಮಗಳ ವರದಿಯಂತೆ ಈಗಾಗಲೇ ಮೂರನೇ ಅಲೆ ಶುರುವಾಗಿದೆ. ಲಾಕ್ಡೌನ್ನಿಂದ ಈಗಾಗಲೇ ಶ್ರಮಿಕ ವರ್ಗ ತುಂಬಾ ನೊಂದಿದೆ. ಹೋರಾಟದಿಂದ ಬಂದಿರುವ ಸಿಎಂ ಆರ್ಥಿಕವಾಗಿ ಸಹಾಯ ಮಾಡಬೇಕು. ಆರ್ಥಿಕ ಸಂಕಷ್ಟ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಇದಕ್ಕಾಗಿ ಎಲ್ಲಾ ಶಾಸಕರು, ಪರಿಷತ್ ಸದಸ್ಯರ ಒಂದು ವರ್ಷದ ವೇತನ ಬಳಸಿಕೊಳ್ಳಿ ಎಂದರು.