ಯಾರಾದರೂ ಹೆರಿಗೆ ಮಾಡಿ. ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ | ಜನತಾ ನ್ಯೂಸ್
ವಿಜಯಪುರ : ಬಬಲೇಶ್ವರ ಪಟ್ಟಣದ ಹಣಮವ್ವ ಕೊರವರ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕುಟುಂಬಸ್ಥರು ಆಕೆಯನ್ನು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ವಿಜಯಪುರಕ್ಕೆ ಕರೆದೊಯ್ಯಲು ತಿಳಿಸಿದ್ದರು. ಅಲ್ಲಿಂದ ವಿಜಯಪುರ ಜಿಲ್ಲಾಸ್ಪತ್ರೆಗೆ ಹಣಮವ್ವನನ್ನು ಕರೆದುಕೊಂಡು ಬಂದರೆ ವೈದ್ಯರು ಸ್ಪಂದಿಸಿಲ್ಲ. ಬಳಿಕ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಆದರೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ಹಿಂದೇಟು ಹಾಕಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಡೆಲಿವರಿ ಮಾಡಿಸಲು ತಡವಾಗುತ್ತದೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಹೇಳಿದರು. ಹೀಗಾಗಿ ಆಯಂಬುಲೆನ್ಸ್ ಮೂಲಕ ನಗರದ ಸಂಜೀವಿನಿ ಆಸ್ಪತ್ರೆಗೆ ಮಹಿಳೆಯನ್ನು ಕರೆ ತಂದಿದ್ದರು.
ಮಗುವಿನ ಕಾಲು ಹೊರಬಂದಿತ್ತು. ಕುಟುಂಬಸ್ಥರು ಆತಂಕಕ್ಕೆ ಒಳಗಾಗಿ ಆಸ್ಪತ್ರೆ ಸುತ್ತಲೂ ಸಹಾಯ ಮಾಡಿ ಎಂದು ಗೋಳಾಡುತ್ತಿದ್ದರು. ಮಗುವಿನ ಕಾಲು ಹೊರ ಬಂದಿದೆ.. ಕೈ ಮುಗಿತೀವಿ, ತಾಯಿ-ಮಗುವಿನ ಜೀವ ಉಳಿಸಿ, ಎಂದು ಗೋಗರೆಯುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಆದರೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಹೀಗಾಗಿ ಆಸ್ಪತ್ರೆಯ ಮುಂಭಾಗ ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರು ಗಲಾಟೆ ಮಾಡಿದ ಬಳಿಕ ಸಂಜೀವಿನ ಆಸ್ಪತ್ರೆ ವೈದ್ಯರು ಮಹಿಳೆಯನ್ನು ದಾಖಲಿಸಿಕೊಂಡಿದ್ದಾರೆ.
ಕೂಡಲೇ ಅದೇ ಖಾಸಗಿ ಆಸ್ಪತ್ರೆಗೆ ಬೇರೆ ವೈದ್ಯರನ್ನು ಕರೆಯಿಸಿ ಹೆರಿಗೆ ಮಾಡಿಸಲಾಗಿದೆ. ಆದರೆ ಮಗು ಬದುಕುಳಿದಿಲ್ಲ ಎನ್ನಲಾಗಿದೆ.