3 ದಿನದ ಹಿಂದೆ ಪತಿ ಕೊರೊನಾಗೆ ಬಲಿ: ನೊಂದ 3 ತಿಂಗಳ ಗರ್ಭಿಣಿ ಪತ್ನಿ ಆತ್ಮಹತ್ಯೆ | ಜನತಾ ನ್ಯೂಸ್
ರಾಮನಗರ : ಕೊರೋನಾದಿಂದ ಪತಿಯನ್ನು ಕಳೆದುಕೊಂಡ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕನಕಪುರದ ಬಸವೇಶ್ವರ ನಗರದಲ್ಲಿಂದು 3 ತಿಂಗಳ ಗರ್ಭಿಣಿ ನಂದಿನಿ (28) ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕನಕಪುರ ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಸಹಾಯಕರಾಗಿದ್ದ ನಂದಿನಿ (28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಶಾಂತಮಲ್ಲಪ್ಪ ಕೆಇಬಿಯಲ್ಲಿ ಲೈನ್ಮ್ಯಾನ್ ಆಗಿದ್ದು, ಕೆಲಸದಲ್ಲಿ ಇದ್ದಾಗಲೇ ಸಾವನ್ನಪ್ಪಿದ್ದರು.
ಅನುಕಂಪದ ಆಧಾರದ ಮೇಲೆ ಮಗಳಿಗೆ ಮೂರು ವರ್ಷಗಳ ಹಿಂದೆ ಬೆಸ್ಕಾಂನಲ್ಲಿ ತಂದೆಯ ಕೆಲಸ ಸಿಕ್ಕಿತ್ತು. ಎರಡು ವರ್ಷಗಳ ಹಿಂದೆ ಮೈಸೂರು ಮೂಲದ ಉದ್ಯಮಿ ಸತೀಶ್ ಎಂಬುವರನ್ನು ನಂದಿನಿ ಪ್ರೀತಿಸಿ ವಿವಾಹವಾಗಿದ್ದು, ಇಲ್ಲಿನ ಬಸವೇಶ್ವರ ನಗರದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು.
ಮೃತ ಗೃಹಿಣಿಯ ಪತಿ ಸತೀಶ್ ಕಳೆದ 4 ದಿನಗಳ ಹಿಂದೆ ಕೊರೋನಾದಿಂದ ಮೃತಪಟ್ಟಿದ್ದರು.
ಪತಿಯ ಸಾವಿನ ನಂತರ ನಂದಿನಿ ಮಾನಸಿಕವಾಗಿ ನೊಂದಿದ್ದು ಅವರನ್ನು ತಾಯಿ ಮತ್ತು ತಂಗಿಯಂದಿರು ಜೊತೆಯಲ್ಲಿದ್ದರು, ಮಧ್ಯಾಹ್ನ ಸುಮಾರು 1 ಗಂಟೆಗೆ ಕೆಲಸವಿದೆ ಎಂದು ಹೇಳಿ ನಂದಿನಿ ರೂಂಗೆ ಹೋಗಿದ್ದಾರೆ.
ಸಮಯ ಕಳೆದ್ರೂ ನಂದಿನಿ ಹೊರಗೆ ಬಂದಿಲ್ಲವೆಂದು ಆತಂಕಗೊಂಡ ತಾಯಿ ಮತ್ತು ತಂಗಿಯರು ರೂಂನೊಳಗೆ ಹೋಗಿ ನೋಡಿದಾಗ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಸಂಬಂಧ ಕನಕಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.