ಕರ್ನಾಟಕ ಸರ್ಕಾರದಿಂದ ಅರ್ಚಕ ವೃಂದಕ್ಕೆ 2 ತಿಂಗಳ ಆಹಾರ ಕಿಟ್ ವಿತರಣೆ! | ಜನತಾ ನ್ಯೂಸ್
ಬೆಂಗಳೂರು : ದೇವಾಲಯಗಳಲ್ಲಿ ಸೇವೆ ಸಲ್ಲಿಸುವ ಅರ್ಚಕರಿಗೆ ಎರಡು ತಿಂಗಳ ತಸ್ತೀಕ್, ಆಹಾರ ಕಿಟ್ ಬಿಡುಗಡೆ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅರ್ಚಕರಿಗೆ ಪ್ರಸಕ್ತ ಮೇ ಹಾಗೂ ಜೂನ್ ತಿಂಗಳ ತಸ್ತೀಕ್ ಬಿಡುಗಡೆ ಮಾಡಲಾಗಿದ್ದು, ಇದರಿಂದ ಸುಮಾರು 27 ಸಾವಿರ ಅರ್ಚಕರಿಗೆ ಮುಂಗಡ ತಸ್ತೀಕ್ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಅರ್ಚಕ ವರ್ಗಕ್ಕೆ ಮುಂಗಡ 33.5 ಕೋಟಿ ರೂ. ತಸ್ತಿಕ್ ಮತ್ತು 4.5 ಕೋಟಿ ರೂ. ವರ್ಷಾಸನವನ್ನು ಮುಂಗಡವಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಸಿ ದರ್ಜೆಯ ದೇವಸ್ಥಾನಗಳಲ್ಲಿ ದುಡಿಯುವ ಅರ್ಚಕ ಮತ್ತು ದೇವಳದ ಸಿಬ್ಬಂದಿ ವರ್ಗಕ್ಕೆ ಈ ಆಹಾರ ಸಾಮಗ್ರಿಗಳನ್ನು ನೀಡಬೇಕು. ಸಾಲದಿದ್ದಲ್ಲಿ ದೇವಳದ ಆದಾಯದ ನಿಧಿಯಿಂದ ವೆಚ್ಚ ಭರಿಸಿ ಆಹಾರ ಕಿಟ್ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಸರ್ಕಾರದ ಈ ನಿರ್ಧಾರದಿಂದ 50 ಸಾವಿರಕ್ಕೂ ಹೆಚ್ಚು ಅರ್ಚಕರಿಗೆ ಆಹಾರ ಸಾಮಗ್ರಿ ಕಿಟ್ ದೊರೆಯಲಿದೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಏಪ್ರಿಲ್ 21 ರಂದೇ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಿದ್ದು, ದೇವಾಲಯಗಳಲ್ಲಿ ಸೇವೆ ಸಲ್ಲಿಸುವ ಅರ್ಚಕ ವರ್ಗಕ್ಕೂ ಇದರಿಂದ ತುಂಬಾ ನಷ್ಟವಾಗಿತ್ತು. ದೇವಸ್ಥಾನಗಳಲ್ಲಿ ಸಲ್ಲುವ ತ್ರಿಕಾಲ ಪೂಜೆಗೂ ಭಕ್ತ ರಹಿತವಾಗಿ ಮಾಡಲು ಧಾರ್ಮಿಕ ದತ್ತಿ ಇಲಾಖೆ ಸೂಚಿಸಿತ್ತು.