ಹುಂಡಿ ಕಾಣಿಕೆ ವೈದ್ಯ ಎಂದು ಖ್ಯಾತವಾದ ಡಾ.ಅಶೋಕ ಸೋನ್ನದ ನಿಧನ. | ಜನತಾ ನ್ಯೂಸ್
ಬಾಗಲಕೋಟೆ : ಹುಂಡಿ ಕಾಣಿಕೆ ವೈದ್ಯರೆಂದು ಖ್ಯಾತವಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ವೈದ್ಯ ಡಾ.ಅಶೋಕ ರಾಮನ್ನ. ಸೋನ್ನದ (83) ನಿಧನವಾಗಿದ್ದಾರೆ.
ಮೂಲತಃ ಮುಧೋಳ ತಾಲೂಕಿನ ಬಂಟನೂರು ಗ್ರಾಮದ ಡಾ.ಅಶೋಕ ಸೊನ್ನದ ಅವರು ಅಮೆರಿಕದಲ್ಲಿ 40 ವರ್ಷ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ತದನಂತರ ಬಾಗಲಕೋಟೆ ನಗರದಲ್ಲಿಯೇ ಇದ್ದರು. ಇಲ್ಲಿನ ಜನರಿಗೆ ಉಚಿತ ಚಿಕಿತ್ಸೆ ನೀಡುತ್ತ ಸಮಾಜ ಸೇವೆ ಸಲ್ಲಿಸುತ್ತಿದ್ದರು. ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ ನಡೆಸಿದ್ದರು.
ಇವರ ಮನೆಯಲ್ಲಿ ಏಳು ಜನ ಪಿ.ಎಚ್.ಡಿ. ಪದವೀಧರರಿದ್ದು ಡಾಕ್ಟರೇಟ್ ಕುಟುಂಬ ಎಂಬ ಗಿನ್ನಿಸ್ ದಾಖಲೆಯೂ ಇವರ ಕುಟುಂಬಕ್ಕಿದೆ. ಇವರ ಸೇವೆಗೆ 2020ರಲ್ಲಿ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದಿತ್ತು.
ಇತ್ತೀಚಿಗೆ ಡಾ. ಅಶೋಕ ಅವರಿಗೆ ಕರೊನಾ ಸೋಂಕು ತಗುಲಿತ್ತು. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಅಶೋಕ ಸೊನ್ನದ ಅವರ ಬಳಿ ಚಿಕಿತ್ಸೆ ಪಡೆಯಲು ಬಂದ ರೋಗಿಗಳಿಗೆ ಅವರ ಸೇವೆ ತೃಪ್ತಿಯಾದರೆ ಮಾತ್ರ ಕ್ಲಿನಿಕ್ನ ಪ್ರವೇಶ ದ್ವಾರದಲ್ಲಿ ಇಟ್ಟಿರುವ ಕಾಣಿಕೆ ಹುಂಡಿಗೆ ನಿಮ್ಮ ಕೈಲಾದಷ್ಟು ದುಡ್ಡು ಹಾಕಲು ಸೂಚಿಸುತ್ತಿದ್ದ ಕಾರಣ ಅವರು ಹುಂಡಿ ಕಾಣಿಕೆ ವೈದ್ಯ ಎಂದು ಜನಪ್ರಿಯವಾಗಿದ್ದರು.
ಡಾ. ಅಶೋಕ್ ಸೊನ್ನದ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಕುಟುಂಬ ಅಮೆರಿಕದಲ್ಲಿ ನೆಲೆಸಿದೆ.