ಅಪಘಾತದಲ್ಲಿ ಆರೋಗ್ಯಾಧಿಕಾರಿ ಸಾವು: ಕಾರಿನಲ್ಲೇ ಕುಳಿತಿದ್ದ ಶಾಸಕರ ನಡೆಗೆ ಆಕ್ರೋಶ | ಜನತಾ ನ್ಯೂಸ್
ಚಿಕ್ಕಮಗಳೂರು : ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಅರ್ಧಗಂಟೆ ರಸ್ತೆಯಲ್ಲೇ ನರಳಾಡಿ ಕರೊನಾ ವಾರಿಯರ್ಸ್ ಪ್ರಾಣ ಬಿಟ್ಟಿರುವ ಘಟನೆ ತರೀಕೆರೆಯ ಲಕ್ಕವಳ್ಳಿ ಕ್ರಾಸ್ನಲ್ಲಿ ನಡೆದಿದೆ.
ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರೂ ಸಹಾಯ ಮಾಡದೆ, ಸಮಯ ಪ್ರಜ್ಞೆ ಮರೆತು ಶಾಸಕ ಡಿ.ಎಸ್ ಸುರೇಶ್ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿತ್ತು. ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ನಡೆದಿತ್ತು. ಘಟನೆಯಲ್ಲಿ ಕೊರೊನಾ ಡ್ಯೂಟಿ ಮುಗಿಸಿ ಬರುತ್ತಿದ್ದ ಹಿರಿಯ ಆರೋಗ್ಯಾಧಿಕಾರಿಗೆ ಅಪಘಾತವಾಗಿದ್ದು ಅವರು ರಕ್ತದ ಮಡುವಿನಲ್ಲಿ ಒದ್ದಾಟ ನಡೆಸುತ್ತಿದ್ದರು. ಅರ್ಧಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲೇ ಒದ್ದಾಡಿದ್ದಾರೆ.
ಇದೇ ವೇಳೆ ಶಾಸಕ ಸುರೇಶ್ ಅವರ ಕಾರು ಅಲ್ಲಿಗೆ ಬಂದಿತ್ತು. ಆಂಬ್ಯುಲೆನ್ಸ್ ಕರೆ ಮಾಡಿದರೂ ಅರ್ಧ ಗಂಟೆಯಾದ್ರೂ ಬರಲೇ ಇಲ್ಲ. ಇತ್ತ ರಮೇಶ್ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದರೂ ಶಾಸಕರು ಮಾತ್ರ ಕಾರು ನಿಲ್ಲಿಸಿಕೊಂಡು ಕಾರಿನೊಳಗಡೆಯೇ ಕುಳಿತಿದ್ದರು.
ತಡವಾಗಿ ಬಂದ ಆಂಬ್ಯುಲೆನ್ಸ್ನಲ್ಲಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ರಮೇಶ್ ಕೊನೆಯುಸಿರೆಳೆದಿದ್ದಾರೆ.
ಕಣ್ಣ ಮುಂದೆ ಪ್ರಾಣ ಹೋಗ್ತಿದ್ರೂ ಆರೋಗ್ಯಾಧಿಕಾರಿಯ ಜೀವ ರಕ್ಷಿಸುವ ಕೆಲಸ ಮಾಡಿಲ್ಲ. ಅಮಾನವೀಯವಾಗಿ ವರ್ತಿಸಿದ್ದಾರೆ. ಶಾಸಕ ಸುರೇಶ್ರ ಈ ನಡೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.