ಯಾಸ್ ಚಂಡಮಾರುತ ವೈಮಾನಿಕ ಸಮೀಕ್ಷೆ: ಒಡಿಶಾ, ಪಶ್ಚಿಮಬಂಗಾಳ, ಜಾರ್ಖಂಡ್ ಗೆ 1 ಸಾವಿರ ಕೋಟಿ ರೂ. ಪರಿಹಾರ ಘೋಷಣೆ | ಜನತಾ ನ್ಯೂಸ್
ಕೋಲ್ಕತ್ತಾ : ಯಾಸ್ ಚಂಡಮಾರುತ ಪೀಡಿತ ಒಡಿಶಾ ರಾಜ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದರು.
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಬಂಗಾಳದ ಕಲೈಕುಂಡದಲ್ಲಿ ಭೇಟಿಯಾದರು. ಯಾಸ್ ಚಂಡಮಾರುತದಿಂದ ಉಂಟಾದ ಹಾನಿಗಳ ಬಗ್ಗೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದರು. ಆದರೆ, ಮೋದಿಯೊಂದಿಗೆ ನಡೆದ ರಿವ್ಯೂ ಮೀಟ್ನಲ್ಲಿ ಭಾಗಿಯಾಗದ ಬ್ಯಾನರ್ಜಿಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಟೀಕಿಸಿದ್ದಾರೆ.
ಯಾಸ್ ಚಂಡಮಾರುತ ಹಿನ್ನಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದ ಪಶ್ಚಿಮ ಮೆದಿನಿಪುರ ಜಿಲ್ಲೆಯಲ್ಲಿ ಪರಿಶೀಲನಾ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಸಂಭವಿಸಿರುವ ಹಾನಿಯ ಕುರಿತು ವರದಿ ಸಲ್ಲಿಕೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಹಾನಿಯನ್ನು ಅಂದಾಜು ಮಾಡಲು ಕೇಂದ್ರ ಸರ್ಕಾರದ ಉನ್ನತ ಮಟ್ಟದ ನಿಯೋಗವನ್ನು ಕಳಿಸಲಾಗುವುದು. ಒಡಿಶಾದೊಂದಿಗೆ ಕೇಂದ್ರ ಸರ್ಕಾರ ಇದೆ ಎಂದು ಹೇಳಿದರು.
ಒಡಿಶಾಕ್ಕೆ 500 ಕೋಟಿ ರೂಪಾಯಿ, ಉಳಿದ 500 ಕೋಟಿ ರೂಪಾಯಿಯಲ್ಲಿ ಪಶ್ಚಿಮಬಂಗಾಳ ಮತ್ತು ಜಾರ್ಖಂಡ್ ರಾಜ್ಯಕ್ಕೆ ಹಂಚಲಾಗಿದೆ ಎಂದು ವರದಿ ತಿಳಿಸಿದೆ. ಕೇಂದ್ರ ಸರ್ಕಾರದ ತಂಡ ಹಾನಿ ಪರಿಶೀಲಿಸಿದ ನಂತರ ನೀಡುವ ನಷ್ಟದ ವರದಿ ಆಧಾರದ ಮೇಲೆ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಯಾಸ್ ಚಂಡಮಾರುತದಿಂದ ಮೃತಪಟ್ಟ ಕುಟುಂಬದ ವ್ಯಕ್ತಿಗಳಿಗೆ 2 ಲಕ್ಷ ರೂಪಾಯಿ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಈಗಾಗಲೇ ಸರ್ಕಾರ ಘೋಷಿಸಿದೆ.