ಸಿಎಂ ಮೇಲೆ ನಂಬಿಕೆ ಇಲ್ಲದಿದ್ದರೆ ಸಚಿವ ಸ್ಥಾನ ಬಿಡಿ, ರಾಜೀನಾಮೆ ಕೊಟ್ಟು ಹೋಗಿ | ಜನತಾ ನ್ಯೂಸ್
ಶಿವಮೊಗ್ಗ : ಮುಖ್ಯಮಂತ್ರಿ ಮೇಲೂ ನಂಬಿಕೆ ಇಲ್ಲ. ಹೈಕಮಾಂಡ್ ಮೇಲೂ ನಂಬಿಕೆ ಇಲ್ಲ ಅನ್ನುವುದಾದರೆ ಸಿ. ಪಿ. ಯೋಗೇಶ್ವರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಪಕ್ಷದ ಎಲ್ಲ ಶಾಸಕರು, ಮಂತ್ರಿಗಳು ಕಲ್ಲು ಬಂಡೆಯ ರೀತಿಯಲ್ಲಿ ಇದ್ದೇವೆ. ಸಿ.ಪಿ.ಯೋಗೀಶ್ವರ್ ಅವರು ದೆಹಲಿಗೆ ಹೋಗಿ ಬಂದ ಮೇಲೆ ಮಾಧ್ಯಮದ ಎದುರು ಬಂದಿದ್ದು ತಪ್ಪು. ಹೈಕಮಾಂಡ್ಗೆ ದೂರು ನೀಡಿದ ಮೇಲೆ ಅವರು ಗಮನಿಸುವವರೆಗೂ ಸುಮ್ಮನಿರಬೇಕು ಎಂದರು.
ರಾಜ್ಯ ಬಿಜೆಪಿಯ ಎಲ್ಲಾ ಶಾಸಕರು ಕಲ್ಲು ಬಂಡೆಗಳಂತೆ ಒಗ್ಗಟ್ಟಾಗಿ ಇದ್ದೇವೆ. ಕೇಂದ್ರ ನಾಯಕರು ಸಿಎಂ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ. ಅವರ ತೀರ್ಮಾನಕ್ಕೆ ನಾವು ಬದ್ಧ ಎಂದು ತಿಳಿಸಿದರು.
ಸಿಎಂ ಬದಲಾವಣೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ, "ಕಾಂಗ್ರೆಸ್ನವರಿಗೆ ಜನರು ಕುತ್ತಿಗೆ ಹಿಡಿದು ಹೊರಗೆ ತಳ್ಳಿದ್ದಾರೆ. ಆದರೂ ಅವರಿಗೆ ಬುದ್ದಿ ಬಂದಿಲ್ಲ. ಮತ್ತೆ ಯಾವಾಗ ಸಿಎಂ ಕುರ್ಚಿ ಮೇಲೆ ಕೂರುತ್ತೇವೆ ಎಂದು ಬಕಪಕ್ಷಿಗಳಂತೆ ಕಾದು ಕೂತಿದ್ದಾರೆ" ಎಂದು ಟೀಕಿಸಿದರು.
ಪಕ್ಷದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ನಾಲ್ಕು ಗೋಡೆ ಮಧ್ಯೆ ಹೇಳಿಕೊಳ್ಳಲು ಅವಕಾಶ ಇದೆ. ಪಕ್ಷದಲ್ಲಿ ಯಾವುದೇ ಸರ್ವಾಧಿಕಾರ ಇಲ್ಲ. ಆದರೆ ನಿಮಗೆ ಸಂತೋಷ ಇದ್ದರೆ ಕ್ಯಾಬಿನೆಟ್ ನಲ್ಲಿರಿ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೊರ ಹೋಗಿ. ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಸೇರಿದಂತೆ ಎಲ್ಲರೂ ಸೋಂಕು ದೂರ ಮಾಡಲು ಶ್ರಮಿಸುತ್ತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ನೀವು ಯಾಕೆ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತೀರಾ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು.