ವಿದ್ಯುತ್ ಸ್ಪರ್ಶಿಸಿ ತಾಯಿ, ಮಗು ದುರ್ಮರಣ | ಜನತಾ ನ್ಯೂಸ್
ಬೆಳ್ತಂಗಡಿ : ವಿದ್ಯುತ್ ಶಾಕ್ ತಗುಲಿ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ಕೊಡಂದೂರು ನಿವಾಸಿ ಹರೀಶ್ ಗೌಡ ಎಂಬವರ ಪತ್ನಿ ಗೀತಾ (30) ಹಾಗೂ ಪುತ್ರ ಭವಿಷ್ (4) ಮೃತಪಟ್ಟವರು. ಕೊಕ್ಕಡ ಸಮೀಪದ ಪಟ್ರಮೆ ಎಂಬಲ್ಲಿ ಕೋಡಂದೂರು ನಿವಾಸಿ ಹರೀಶ್ ಎಂಬವರ ಪತ್ನಿ ಗೀತಾ ಹಾಗೂ ನಾಲ್ಕೂವರೆ ವರ್ಷದ ಮಗು ಭವಿಷ್ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಇಂದು ಮುಂಜಾನೆ ಗೀತಾರವರು ಮಗು ಭವಿಷ್ನನ್ನು ಹಿಡಿದುಕೊಂಡು ಮನೆ ಸಮೀಪದ ತೋಟಕ್ಕೆ ನೀರು ಬಿಡಲು ಪಂಪ್ ಸ್ವಿಚ್ ಆನ್ ಮಾಡಲು ಹೋಗಿದ್ದರು. ಪಂಪ್ ಸ್ವಿಚ್ ಹಾಕುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ವಿದ್ಯುತ್ ಅಘಾತಕ್ಕೆ ಒಳಗಾಗಿ ತಾಯಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪಂಪ್ ಸ್ವಿಚ್ ಆನ್ ಮಾಡಲು ತೆರಳಿದ್ದ ತಾಯಿ ಮತ್ತು ಮಗು ಮನೆಗೆ ಹಿಂದಿರುಗದೇ ಇರುವ ಕಾರಣ ಪತಿ ಹರೀಶ್ ತೋಟದ ಪಂಪ್ ಹೌಸ್ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ಮುಂದುವರೆಸಿದ್ದಾರೆ.