ಬಿಎಸ್ ಯಡಿಯೂರಪ್ಪ ನಮ್ಮ ಸರ್ವ ಸಮ್ಮತಿಯ ನಾಯಕ: ನಳೀನ್ ಕುಮಾರ್ ಕಟೀಲ್ | ಜನತಾ ನ್ಯೂಸ್
ಮಂಗಳೂರು : ನಮ್ಮಲ್ಲಿ ನಾಯಕರ ಕೊರತೆ ಇಲ್ಲ, ನಮ್ಮ ಸರ್ವ ಸಮ್ಮತಿಯ ನಾಯಕ ಬಿ.ಎಸ್.ಯಡಿಯೂರಪ್ಪ ಎಂದು ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಳಿಕ ಸಮರ್ಥ ನಾಯಕನಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕಟೀಲ್, ಯಡಿಯೂರಪ್ಪನವರು ಪಕ್ಷಾಂತರ ಮಾಡಿ. ಯಾರದ್ದೋ ಕಾಲು ಹಿಡಿದು ಮುಖ್ಯಮಂತ್ರಿಯಾಗಿಲ್ಲ. ಸುದೀರ್ಘ ಹೋರಾಟದ ಮೂಲಕ ಯಡಿಯೂರಪ್ಪ ಈಗ ಅತಿ ಎತ್ತರದ ಸ್ಥಾನಕ್ಕೆ ಬಂದಿದ್ದಾರೆ.
ಸಿದ್ದರಾಮಯ್ಯ ಈ ಮಾತು ಹೇಳುವ ಮುಂಚೆ ಯೋಚಿಸಬೇಕಿತ್ತು. ಅವರು ಮುಂಚೆ ಎಲ್ಲಿದ್ದರು?, ಯಾರು ಅವರ ಗುರು ಆಗಿದ್ದರು?, ಕಾಂಗ್ರೆಸ್ಗೆ ಬೈದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದು ಮುಖ್ಯಮಂತ್ರಿ ಆಗಿದ್ದನ್ನು ಜಗತ್ತು ನೋಡಿದೆ. ಹಾಗಾಗಿ ಸಿದ್ಧರಾಮಯ್ಯ ಈ ಮಾತು ಹೇಳುವ ಮುಂಚೆ ಯೋಚಿಸಬೇಕಿತ್ತು ಎಂದು ಕಟೀಲ್ ಟೀಕಿಸಿದರು.
ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ. ಕಾಂಗ್ರೆಸ್ ನಲ್ಲಿ ಸಮರ್ಥ ನಾಯಕ ಇಲ್ಲ ಎಂಬುದು ಆ ಪಕ್ಷದ ಹೈಕಮಾಂಡ್ಗೂ ಗೊತ್ತಿದೆ ಎಂದು ಕಟೀಲ್ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಸಮರ್ಥ ನಾಯಕ ಅಲ್ಲ. ಕಾಂಗ್ರೆಸ್ ನಲ್ಲಿ ಸಮರ್ಥ ನಾಯಕ ಇಲ್ಲ ಅಂತಾ ಸೋನಿಯಾ ಗಾಂಧಿ ತೀರ್ಮಾನ. ಹೀಗಾಗಿ ಸಿದ್ದರಾಮಯ್ಯ ಮಾತನಾಡುವಾಗ ಯೋಚನೆ ಮಾಡಬೇಕು ಎಂದು ತಿರುಗೇಟು ನೀಡಿದರು.