ಯೋಗೇಶ್ವರ್ ಅವರನ್ನ ಸಂಪುಟದಿಂದ ವಜಾ ಮಾಡಿ, ಮೆಗಾ ಸಿಟಿ ಹಗರಣದ ಹಿನ್ನೆಲೆ ಬಂಧಿಸಬೇಕು: ರೇಣುಕಾಚಾರ್ಯ | ಜನತಾ ನ್ಯೂಸ್
ದಾವಣಗೆರೆ : ಕೋವಿಡ್ ಸೋಂಕಿನಿಂದಾಗಿ ಜನರು ತತ್ತರಿಸಿರುವ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಬಂಡಾಯ ಮೂಡಿಸುತ್ತಿರುವ ಸಿಪಿ ಯೋಗೇಶ್ವರ್ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡಿರುವಂತಹ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಮತ್ತು ಮೆಗಾಸಿಟಿ ಯೋಜನೆಯಲ್ಲಿ ನಡೆದಿದೆನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಪಡಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪುನರುಚ್ಚರಿಸಿದ್ದಾರೆ.
ಮೆಗಾಸಿಟಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತ ದಾಖಲೆಗಳು ತಮ್ಮಲ್ಲಿ ಇವೆ. ಕೊರೊನಾ ಮುಗಿದ ನಂತರ ಸಭೆ ನಡೆಸಿ, ನಾವು ಏನು ಎಂಬುದನ್ನ ತೋರಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದ ಅವರು ಸಚಿವ ಸಿ.ಪಿ. ಯೋಗೇಶ್ವರ್ ಅವರ ಹೆಸರು ಪ್ರಸ್ತಾಪಿಸದೆ ಹರಿಹಾಯ್ದರು.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಸಿಪಿ ಯೋಗೇಶ್ವರ ವಜಾಕ್ಕೆ ನಾವು ಈಗಾಗಲೇ ಒತ್ತಾಯಿಸಿದ್ದೇವೆ. ಈ ಸಂಬಂಧ 65 ಶಾಸಕರು ಮನವಿ ಮಾಡಿದ್ದೇವೆ. ಇಂತಹ ಸಂದರ್ಭದಲ್ಲಿ ರಾಜಕೀಯ ನಡೆಸುತ್ತಿರುವ ಯೋಗೇಶ್ವರ್ ವಿರುದ್ದ ಪಕ್ಷ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆತನ ಮೇಲೆ ಕ್ರಮ ಕೈಗೊಳ್ಳಲು ಸಿಎಂಗೆ ಯಾವ ಹೆದರಿಕೆ ಇಲ್ಲ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇವರಂತೆ ರೆಡಿಮಿಡ್ ಫುಡ್ ಅಲ್ಲ. ಪಕ್ಷ ಸಂಘಟನೆ, ಹೋರಾಟದಿಂದ ಬಂದವರು. ಯಡಿಯೂರಪ್ಪ ಅವರು ಪಕ್ಷದ ಆಲದ ಮರ ಇದ್ದಂತೆ. ಅವರ ನೆರಳಲ್ಲಿ ನಾವು ಇದ್ದೇವೆ. ಅವರ ಬೆನ್ನಿಗೆ ಚೂರಿ ಹಾಕಿದರೆ, ನಾವು ಬೀಡುವುದಿಲ್ಲ. ಅದು ನಡೆಯಲ್ಲ ಎಂದು ಗುಡುಗಿದರು.
ಸಚಿವ ಸಿ.ಪಿ. ಯೋಗೇಶ್ವರ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಆಗದೆ ಇದ್ದವರು. ಕಾಂಗ್ರೆಸ್ನಲ್ಲಿ ಸೋತು ಬಿಜೆಪಿಗೆ ಬಂದವರು. ಅವರ ಮೆಗಾ ಸಿಟಿ ಹಗರಣ ಎಲ್ಲರಿಗೂ ಗೊತ್ತಿದೆ. ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ. ಇಂತಹ ಸಂದರ್ಭದಲ್ಲಿ ಸೇವಕರಾಗಿ ಕೆಲಸ ಮಾಡ್ಬೇಕು. ಇದು ಬಿಜೆಪಿ ಸರ್ಕಾರ. ಇದು ಮೂರು ಪಕ್ಷದ ಸರ್ಕಾರ ಅಲ್ಲ. ಆ ರೀತಿ ಮಾತನಾಡುವುದಾದರೆ ಅವರು ರಾಜೀನಾಮೆ ಕೊಟ್ಟು ಹೋಗಲಿ ಎಂದರು.
ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಲಾಕ್ಡೌನ್ ಮುಂದುವರೆಸಲಾಗುತ್ತಿದೆ ಎಂಬ ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಯತ್ನಾಳ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಬಹಳ ಹಗರುರವಾಗಿ ಮಾತನಾಡುತ್ತಾರೆ. ಯಡಿಯೂರಪ್ಪ ಅವರು ಮಕ್ಕಳ ಮೂಲಕ ರಾಜಕೀಯ ಮಾಡುವಂತಹವರಲ್ಲ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಲಾಕ್ಡೌನ್ ಮುಂದುವರೆಸಲಾಗುತ್ತಿದೆ ಎಂಬ ಹೇಳಿಕೆ ಮಾನಸಿಕ ಅಸ್ವಸ್ಥತೆಯ ಪ್ರತೀಕ ಎಂದರು.