ತಂದೆ ಅಂತ್ಯಕ್ರಿಯೆ ವೇಳೆ ಕುಸಿದುಬಿದ್ದ ಮಗನ ಸಾವು | ಜನತಾ ನ್ಯೂಸ್
ಮಂಗಳೂರು : ಕೋವಿಡ್ನಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರದ ವೇಳೆ ಮಗನೂ ಸಹ ಕುಸಿದುಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಬೈಲುಗುತ್ತಿನಲ್ಲಿ ನಡೆದಿದೆ.
ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳ ನಿವಾಸಿ ನಿವೃತ್ತ ಕೆ.ಪಿ.ಟಿ. ಪ್ರೊಫೆಸರ್ ಭುಜಂಗ ಶೆಟ್ಟಿ (87) ಕೋವಿಡ್ನಿಂದ ಮರಣ ಹೊಂದಿದ್ದರು. ಬುಧವಾರ ತಂದೆಯ ಅಂತ್ಯಕ್ರಿಯೆ ಸಂದರ್ಭ ಪುತ್ರ ಶೈಲೇಶ್ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿ ಸೇರಿದ್ದವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಶೈಲೇಶ್ ಅವರನ್ನು ಕರೆತಂದರು. ಆಗಲೇ ಶೈಲೇಶ್ ಮೃತಪಟ್ಟಿದ್ದರು.
ಶೈಲೇಶ್ ಶೆಟ್ಟಿಯವರ ಸಾವಿಗೆ ರಕ್ತದೊತ್ತಡ ಕಡಿಮೆಯಾಗಿದ್ದೇ ಕಾರಣ ಎಂದು ತಿಳಿದುಬಂದಿದೆ. ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದ ಶೈಲೇಶ್ ಶೆಟ್ಟಿ ಕಳೆದ ತಿಂಗಳಷ್ಟೇ ಊರಿಗೆ ಮರಳಿದ್ದರು.