ಬಿಜೆಪಿಯವರ ಮಾತು ಕೇಳಿದ್ರೆ ಜೀವ ಉಳಿಯುತ್ತೇ, ಕಾಂಗ್ರೆಸ್ ನವರ ಮಾತು ಕೇಳಿದ್ರೆ ಜೀವ ಹೋಗುತ್ತೆ; ಸಚಿವ ಬಿ.ಶ್ರೀರಾಮುಲು | ಜನತಾ ನ್ಯೂಸ್
ಚಿತ್ರದುರ್ಗ : ಕೋವಿಡ್ ವಿಚಾರದಲ್ಲಿ ಕಾಂಗ್ರೆಸ್ನವರ ಮಾತು ಕೇಳಿದರೆ ಜೀವ ಹೋಗುತ್ತೇ, ಬಿಜೆಪಿ ಮಾತು ಕೇಳಿದ್ರೆ ಜೀವ ಉಳಿಯುತ್ತೇ ಎಂದು ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ವೇದಾಂತ ಮೈನ್ಸ್ನವರು ನಿರ್ಮಿಸಿರುವ ನೂರು ಬೆಡ್ಗಳ ಕೋವಿಡ್ ತಾತ್ಕಾಲಿಕ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೋವಿಡ್ನಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜನರ ಜೀವನದೊಂದಿಗೆ ರಾಜಕಾರಣ ನಡೆಸುತ್ತಿದೆ. ಇದು ಆ ಪಕ್ಷಕ್ಕೆ ಶೋಭೆ ತಾರದು. ಸೋಲಿನ ಹತಾಶೆಯಿಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ಸಿಗರು ಸಿಎಂ, ಪಿಎಂ ಸಹಿತ ಸರ್ಕಾರಗಳ ವಿರುದ್ಧ ಅಪ್ರಚಾರ ನಡೆಸುತ್ತಿದ್ದಾರೆ. ಇದು ಸರಿಯಲ್ಲ, ಜನರ ಜೀವ ಕಾಪಾಡಬೇಕಾಗಿದೆ.
ಈ ನಿಟ್ಟಿನಲ್ಲಿ ಅಗತ್ಯ ಸಲಹೆ ಕೊಟ್ಟರೆ ಸರ್ಕಾರ ಸ್ವೀಕರಿಸುತ್ತದೆ. ದಲಿತ ಮಹಿಳೆಗೆ ಲಸಿಕೆ ಹಾಕಿಲ್ಲ ಎಂಬ ಬೆಂಗಳೂರಿನಲ್ಲಿ ಬಂದ ದೂರಿನ ಕುರಿತಂತೆ ಡಿಸಿಎಂ ಅಶ್ವಥನಾರಾಯಣ ಈಗಾಗಲೇ ವರದಿ ತರಿಸಿಕೊಂಡು ಅಗತ್ಯ ಕ್ರಮ ಜರುಗಿಸಿದ್ದಾರೆ. ಜಾತಿ, ಧರ್ಮ, ವರ್ಗ ಭೇದವಿಲ್ಲದೆ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದರು.
ಸಿಎಂ ಬದಲಾವಣೆ ಕುರಿತು ಮಾತನಾಡಿದ ಸಚಿವರು, ಸಿಎಂ ಬಿಎಸ್ ವೈ ಶಕ್ತಿ ಮೀರಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟಪಡಿಸಿದೆ. ಯಾರೋ ಸಣ್ಣ ಪುಟ್ಟವರು ದೆಹಲಿಗೆ ಹೋಗಿ ರಾಜಕಾರಣ ಸರಿಯಲ್ಲ ಎಂದುಸಚಿವ ಸಿ.ಪಿ.ಯೋಗೀಶ್ವರ್ ಗೆ ಶ್ರೀರಾಮುಲು ಟಾಂಗ್ ನೀಡಿದರು.