ರಾಜ್ಯದಲ್ಲಿ ಮತ್ತೆ ಒಂದು ವಾರ ಲಾಕ್ಡೌನ್ ವಿಸ್ತರಣೆ, 500 ಕೋಟಿ ಆರ್ಥಿಕ ಪ್ಯಾಕೇಜ್: ಸಿಎಂ ಬಿಎಸ್ವೈ ಘೋಷಣೆ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ 1 ವಾರ ಲಾಕ್ಡೌನ್ ಮುಂದುವರೆಸಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದು, ಜೂನ್ 14ರವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ. ಅಲ್ಲದೇ 500 ಕೋಟಿ ರೂಪಾಯಿಗಳ ಲಾಕ್ಡೌನ್ ಪ್ಯಾಕೇಜ್ನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಕೋವಿಡ್ ಪ್ರಕರಣಗಳ ಇಳಿಕೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ, ವಿವಿಧ ವಲಯಗಳಿಗೆ ₹500 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ತಜ್ಞರ ಸಲಹೆ ಆಧಾರದ ಮೇಲೆ ಮುಂದುವರಿಸಲಾಗಿದೆ ಎಂದು ತಿಳಿಸಿದರು. ನಗರ ಪ್ರದೇಶಗಳಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಬಂದಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಕರೊನಾ ವೈರಸ್ ಹೆಚ್ಚಾಗಿರುವುದರಿಂದ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದರೆ ಲಾಕ್ಡೌನ್ ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ತಿಳಿಸಿದರು.
ಮೀನುಗಾರರಿಗೆ, ಮುಜರಾಯಿ ಇಲಾಖೆ ನೋಂದಾಯಿತ ಅರ್ಚಕರು, ಮಸೀದಿಗಳ ಧಾರ್ಮಿಕ ಪೂಜಾರಿಗಳು, ಚಲನಚಿತ್ರ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಪ್ಯಾಕೇಜ್ ಘೋಷಿಸಲಾಗಿದೆ.
ಈ ಘೋಷಣೆಯಲ್ಲಿ ನೇಕಾರರಿಗೆ ತಲಾ ಮೂರು ಸಾವಿರ ಇದಕ್ಕಾಗಿ 39 ಕೋಟಿ ರೂ. ಮೀಸಲಿಡಲಾಗಿದ್ದು, 59 ಸಾವಿರ ನೇಕಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಚಲನಚಿತ್ರ ನೋಂದಾಯಿತ ಕಾರ್ಮಿಕರಿಗೆ ಹಾಗೂ ನೋಂದಾಯಿತ ಮೀನುಗಾರರಿಗೆ ಮತ್ತು ಮುಜರಾಯಿ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ತಲಾ 3 ಸಾವಿರ ರೂ. ನೆರವು ಘೋಷಣೆ ಮಾಡಲಾಗಿದೆ.
ಆಶಾ ಕಾರ್ಯಕರ್ತರಿಗೆ ತಲಾ ಮೂರು ಸಾವಿರ ರೂ. ಹಾಗೂ ಅಂಗನವಾಡಿ ಸಹಾಯಕರಿಗೆ ತಲಾ ಎರಡು ಸಾವಿರ ರೂ. ನೆರವು ಘೋಷಿಸಲಾಗಿದೆ. ಅನುದಾನಿತ ಶಿಕ್ಷಕರಿಗೆ ತಲಾ ಐದು ಸಾವಿರ ರೂ. ಘೋಷಣೆ ಮಾಡಲಾಗಿದೆ. ಒಟ್ಟಾರೆ 500 ಕೋಟಿ ರೂ. ವಿಶೇಷ ಪ್ಯಾಕೇಜ್ ಅನ್ನು ಸಿಎಂ ಬಿಎಸ್ ವೈ ಘೋಷಣೆ ಮಾಡಿದ್ದಾರೆ.
ಶಾಲಾ ಮಕ್ಕಳಿಗೆ ಹಾಲಿನ ಪುಡಿ ವಿತರಣೆ. ಅನುದಾನ ರಹಿತ ಶಾಲಾ ಶಿಕ್ಷಕರಿಗೆ 5 ಸಾವಿರ ರೂ. ಸಹಾಯಧನ. ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ರೂ. ನೆರವು. ಎಂಎಸ್ ಎಂಇ ಕೈಗಾರಿಕೆಗಳ ವಿದ್ಯುತ್ ಶುಲ್ಕ ವಿನಾಯ್ತಿ. ಇತರ ಕೈಗಾರಿಕೆಗಳಿಗೆ ಮೇ, ಜೂನ್ ಶುಲ್ಕ ವಿನಾಯಿತಿಯನ್ನು ಘೋಷಿಸಿದರು.
ಲಾಕ್ಡೌನ್ ವಿಸ್ತರಣೆ ಮಾಡಿದ ಬಿ. ಎಸ್. ಯಡಿಯೂರಪ್ಪ ಹೊಟೇಲ್ ಸಂಜೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು. ಉಳಿದಂತೆ ಎಲ್ಲಾ ಲಾಕ್ಡೌನ್ ನಿಯಮಗಳು ಹಾಗೆಯೇ ಇನ್ನೊಂದು ವಾರ ಮುಂದುವರೆಯಲಿವೆ.
ರಾಜ್ಯದಲ್ಲಿ ಕೋವಿಡ್ ಸೋಂಕು ದೃಢ ಪ್ರಮಾಣ ಶೇ. 5ಕ್ಕಿಂತ ಕಡಿಮೆಯಾದರೆ ನಿಯಮಾವಳಿ ಸಡಿಸಲಾಗುವುದು ಎಂದು ತಿಳಿಸಿದರು.