ಜಿ.ಪಂ ಅಭಿಲೇಖಾಲಯ ಕಟ್ಟಡಕ್ಕೆ ಬೆಂಕಿ, ಬೆಂಕಿ ನಂದಿಸಲು ಹರಸಾಹಸ | ಜನತಾ ನ್ಯೂಸ್
ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿನ ಅಭಿಲೇಖಾಲಯ ಕಚೇರಿ ಕಟ್ಟಡದೊಳಗೆ ಇಂದು ಬೆಳಿಗ್ಗೆ ಆಕಸ್ಮಿಕ ಬೆಂಕಿ ತಗುಲಿ ಮೂರು ಮಹಡಿಯ ಕಟ್ಟಡ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ಬೆಳಿಗ್ಗೆ 8. 15 ರ ಸುಮಾರಿಗೆ ಇದ್ದಕ್ಕಿದ್ದಂತೆ ಕಟ್ಟಡದೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಎರಡು ಅಂತಸ್ತಿನವರೆಗೂ ವ್ಯಾಪಿಸಿತು. ಕಟ್ಟಡದ ನೆಲ ಅಂತಸ್ತಿನಲ್ಲಿ ಕೆ-ಸ್ವಾನ್ ವಿಡಿಯೋ ಕಾನ್ಫರೆನ್ಸ್ ಹಾಲ್ ಇದ್ದು, ಈ ಸಭಾಂಗಣ ಸಂಪೂರ್ಣ ಪ್ಲೈವುಡ್ ನಿಂದ ಕೂಡಿದ್ದಾಗಿದೆ. ಈ ಕಾರಣದಿಂದಾಗಿ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಹೊತ್ತಿಕೊಂಡಿದೆ. ಮೊದಲ ಅಂತಸ್ತಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಚೇರಿ ಹಾಗೂ ಅಕ್ಷರ ದಾಸೋಹ ಕಚೇರಿ ಇದ್ದು, ಮೂರನೇ ಅಂತಸ್ತಿನಲ್ಲಿ ದಾಖಲೆಗಳ ಕೊಠಡಿ ಇದೆ.
ಅವಘಡವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಭೇಟಿ ನೀಡಿ ಪರಿಶೀಲಿಸಿದ್ದಾರೆ.