ತವರು ಮನೆ ತೊರೆದು ಹೋಗ್ತಿದ್ದೀನಿ: ಭಾವುಕರಾದ ರೋಹಿಣಿ ಸಿಂಧೂರಿ | ಜನತಾ ನ್ಯೂಸ್
ಮೈಸೂರು : ಶನಿವಾರ ತಡರಾತ್ರಿ ಮೈಸೂರಿನಿಂದ ವರ್ಗಾವಣೆಯಾದ ರೋಹಿಣಿ ಸಿಂಧೂರಿ ಮೈಸೂರಿನ ಜನತೆಗೆ ಧನ್ಯವಾದ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಭಾವುಕರಾದ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಈ ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಒಳ್ಳೆಯ ಕೆಲಸ ಮಾಡುವಾಗ, ಕೋವಿಡ್ ಸಂಖ್ಯೆ ನಿಯಂತ್ರಣಕ್ಕೆ ಬರೋವಾಗ, ಜನರಿಂದ ಒಳ್ಳೆಯ ಸ್ಪಂದನೆ ಸಿಗೋವಾಗ, ತಾಲೂಕು ಮಟ್ಟದಲ್ಲಿ ಒಳ್ಳೆಯ ಕೆಲಸ ಆಗೋವಾಗ ಇಂತಹ ಸಮಯದಲ್ಲೇ ವರ್ಗಾವಣೆ ಆಗಿದೆ ಎಂದು ಭಾವುಕರಾದರು.
ಹೊಸದಾಗಿ ಬಂದ ಜಿಲ್ಲಾಧಿಕಾರಿಗೆ ಶುಭಾಶಯ ಹೇಳಲು ಬಂದಿದ್ದೆ. ಜಿಲ್ಲೆಯ ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಕೋವಿಡ್ ಕೆಲಸಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಎಂದರು. ಏನ್ ನಡೆದಿದೆ ಹೇಗೆ ನಡೆದಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಯಾವುದೋ ಅಧಿಕಾರಿಯನ್ನ ತೆಗೆಸಿ ಮಿಷನ್ ಮುಗಿಯಿತು ಅಂದುಕೊಳ್ಳೋದು ತಪ್ಪು. ಈ ಥರ ಬೆಳವಣಿಗೆ ಯಾವ ಜಿಲ್ಲೆ, ಯಾವ ಸಂಸ್ಥೆಯಲ್ಲಿ ಆದರೂ ವ್ಯವಸ್ಥೆ ಸರಿ ಮಾಡೋಕೆ ಆಗೋಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ನಮ್ಮ ಕೆಲಸ ಮಾತ್ರ ಮಾತಾಡುತ್ತೆ ಎಂದ ರೋಹಿಣಿ ಸಿಂಧೂರಿ, ಬೇರೆ ಥರ ನಾವು ಮಾತಾಡಲ್ಲ ಮಂಡ್ಯದಲ್ಲಿ ಅತೀ ಹೆಚ್ಚು ಶೌಚಾಲಯ ಕಟ್ಟಿದ್ದೇವೆ, ಹಾಸನದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡ್ಕೊಂಡಿದ್ದೇವೆ ಎಂದರು. ಜೊತೆಗೆ ರೋಹಿಣಿ ಸಿಂಧೂರಿ ಭೂ ಮಾಫಿಯಾಗೆ ಬಲಿಯಾದ್ರಾ ಅನ್ನೋ ಪ್ರಶ್ನೆಗೆ ನೋ ಕಾಮೆಂಟ್ ಎಂದ ರೋಹಿಣಿ ಸಿಂಧೂರಿ, ಥ್ಯಾಂಕ್ಯೂ ಮೈಸೂರು ಎಂದು ಹೇಳಿ ನಿರ್ಗಮಿಸಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ರಾಜ್ಯ ಸರ್ಕಾರ ಶನಿವಾರ ತಡರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆ ಮೂಲಕ ಇಬ್ಬರು ಐಎಎಸ್ ಅಧಿಕಾರಿಗಳ ಕಿತ್ತಾಟಕ್ಕೆ ಅಂತ್ಯ ಕಾಣಿಸಿತ್ತು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದರೆ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಾ. ಬಗಾದಿ ಗೌತಮ್ ಅವರನ್ನು ನೇಮಿಸಲಾಗಿದ್ದು, ನಿನ್ನೆ ಅಧಕಾರ ಸ್ವೀಕರಿಸಿದ್ದಾರೆ.