ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಉಚಿತ ಕೋವಿಡ್ ಲಸಿಕೆ! ದೀಪಾವಳಿವರೆಗೂ ಉಚಿತ ಪಡಿತರ! | ಜನತಾ ನ್ಯೂಸ್
ನವದೆಹಲಿ: : ಜೂನ್ 21ರಿಂದ ಕೇಂದ್ರದಿಂದಲೇ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಕೊರೊನಾ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿದೆ. ಅನೇಕ ಕುಟುಂಬಗಳು ತಮ್ಮವರನ್ನು ಕಳೆದುಕೊಂಡಿದ್ದಾರೆ. ಇದು 100 ವರ್ಷಗಳಲ್ಲಿಯೇ ಅತಿ ದೊಡ್ಡ ಮಹಾಮಾರಿ. ಕೋವಿಡ್ ವಿರುದ್ಧ ಹೋರಾಟದ ವೇಳೆ ದೇಶದಲ್ಲಿಯೇ ಹೊಸ ಆರೋಗ್ಯ ವ್ಯವಸ್ಥೆ ನಿರ್ಮಾಣವಾಗಿದೆ.
ಕೊರೊನಾ ವಿರುದ್ಧ ಹೋರಾಟದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಲಸಿಕೆ ಈ ಮಹಾಮಾರಿಗೆ ಸಂಜೀವಿನಿ. ವಿಶ್ವದಲ್ಲಿ ಲಸಿಕೆ ಉತ್ಪಾದಿಸುವ ಕಂಪನಿಗಳು ಕಡಿಮೆ ಸಂಖ್ಯೆಯಲ್ಲಿವೆ. ಲಸಿಕೆಗೆ ಇಡೀ ವಿಶ್ವದಲ್ಲಿ ಬೇಡಿಕೆ ಹೆಚ್ಚಿವೆ. ಈ ಹಿಂದೆ ವ್ಯಾಕ್ಸಿನ್ ಗಾಗಿ ದಶಕಗಳವರೆಗೂ ಕಾಯಬೇಕಿತ್ತು. ವಿದೇಶದಲ್ಲಿ ಲಸಿಕೆ ಸಿಕ್ಕರೂ ನಮಗೆ ಸಿಗುತ್ತಿರಲಿಲ್ಲ. ಆದ್ರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಲಸಿಕೆ ಹಂಚಿಕೆಯಲ್ಲಿ ಭಾರತ ಮುಂದಿದೆ.
ಮಿಷನ್ ಇಂದ್ರ ಧನುಷ್ ಯೋಜನೆ ಮೂಲಕ ಲಸಿಕೆ ನೀಡಲಾಗುತ್ತಿದೆ. ನಮಗೆ ಬಡ ಮಕ್ಕಳ ಬಗ್ಗೆ ಚಿಂತೆ ಇತ್ತು. ದೇಶದ ವಿಜ್ಞಾನಿಗಳು ಒಂದೇ ವರ್ಷದಲ್ಲಿ ಎರಡು ಲಸಿಕೆ ತಯಾರಿಸುವ ಮೂಲಕ ವಿದೇಶಗಳಿಗಿಂತ ಹಿಂದೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ರು. ಲಸಿಕೆಯ ನೀತಿ ಸ್ಪಷ್ಟವಾಗಿದ್ದು, ಇದುವರೆಗೂ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕೊರೊನಾ ಎರಡನೇ ಅಲೆಗೂ ಮುನ್ನವೇ ಭಾರತದಲ್ಲಿ ಲಸಿಕಾಕರಣ ಆರಂಭವಾಗಿತ್ತು.
ಈ ಮೊದಲು ಲಸಿಕೆ ವಿತರಣೆ ಸಂಬಂಧ ರಾಜ್ಯಗಳಿಗೆ ಶೇ. 50 ಜವಾಬ್ದಾರಿ ವಹಿಸಲಾಗಿತ್ತು. ಆದರೆ ಲಸಿಕೆ ವಿತರಣೆ ಕುರಿತು ಒಂದಷ್ಟು ಟೀಕೆಗಳು ವ್ಯಕ್ತವಾದ್ದರಿಂದ ಲಸಿಕೆ ವಿತರಣೆಯ ಪೂರ್ತಿ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ಹೊರಲಿದ್ದು, ಇನ್ನೆರಡು ವಾರದಲ್ಲಿ ಆ ಕುರಿತು ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದರು.
ಸದ್ಯದಲ್ಲೇ ದೇಶದ ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರ ಉಚಿತವಾಗಿಯೇ ಲಸಿಕೆಯನ್ನು ನೀಡಲಿದೆ. ಲಸಿಕೆಗಾಗಿ ಯಾವುದೇ ರಾಜ್ಯವೂ ಕೇಂದ್ರಕ್ಕೆ ಹಣ ನೀಡಬೇಕಾಗಿಲ್ಲ ಎಂದಿರುವ ಪ್ರಧಾನಿ, ಅಂತಾರಾಷ್ಟ್ರೀಯ ಯೋಗದಿನವಾದ ಜೂ. 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಬೇರೆ ವಯೋಮಾನದವರಿಗೆ ಈಗಾಗಲೇ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಯಾವುದೇ ಭೇದಭಾವ ಪರಿಗಣಿಸದೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೊರೊನಾ ಲಸಿಕೆ ನೀಡಿಕೆ ಮಾರ್ಗಸೂಚಿ, ಉಚಿತ ಲಸಿಕೆ, ನವೆಂಬರ್ವರೆಗೆ ಬಡವರಿಗೆ ಉಚಿತ ಆಹಾರ ಧಾನ್ಯ, ಕೊರೊನಾ ವಿರುದ್ಧದ ಲಸಿಕೆ ತಯಾರಿ, ನೀಡಿಕೆ ಇತ್ಯಾದಿಯಲ್ಲಿ ಭಾರತೀಯರ ಸಾಧನೆ, ಶ್ರಮ, ಮುಂಚೂಣಿಯ ಕಾರ್ಯಕರ್ತರ ಸೇವೆ ಇತ್ಯಾದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಜಯಗಳಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.