ರೋಹಿಣಿ ಸಿಂಧೂರಿ ಮನೆಯ ವಿದ್ಯುತ್ ಬಿಲ್ ತಿಂಗಳಿಗೆ 50 ಸಾವಿರ ರೂ.: ಸಾರಾ ಮಹೇಶ್ ಆರೋಪ | ಜನತಾ ನ್ಯೂಸ್
ಮೈಸೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಶಾಸಕ ಸಾ.ರಾ.ಮಹೇಶ್ ಪತ್ರ ಬರೆದಿದ್ದು, 10 ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮಹೇಶ್, ದಿ ಗ್ರೇಟ್ ಸಿಂಗಂ, ದಕ್ಷ ಅಧಿಕಾರಿಯಂತೆ ರೋಹಿಣಿ ಸಿಂಧೂರಿ. ಅದೇನ್ ಸಿಂಗಂವೋ, ಸಿಂಗಳೀಕನೋ… ಅವರ ಮನೆಯ ಕರೆಂಟ್ ಬಿಲ್ ಒಂದು ತಿಂಗಳಿಗೆ 50 ಸಾವಿರ ರೂಪಾಯಿ! ಯಾವ ಮಂತ್ರಿ ಮನೆಗೂ ಇಷ್ಟು ಬಿಲ್ ಬರಲ್ಲ. 50 ಸಾವಿರ ರೂಪಾಯಿ ಒಬ್ಬ ಸೆಕೆಂಡ್ ಕ್ಲಾಸ್ ಅಧಿಕಾರಿಯ ವೇತನ ಎಂದು ಹರಿಹಾಯ್ದರು.
ನಿರ್ಗಮಿತ ಡಿಸಿ ಆರೋಪಿಸಿರುವಂತೆ ಮೈಸೂರಿನಲ್ಲಿ ನಡೆದಿರುವ ಭೂ ಹಗರಣಗಳ ಬಗ್ಗೆ ಸರ್ಕಾರ ತನಿಖೆ ಮಾಡಬೇಕು. ಅದಕ್ಕಾಗಿ ತನಿಖಾ ಸಮಿತಿ ರಚಿಸಿ. ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ ಸಂವೇದನಶೀಲತೆಯಿಲ್ಲದ ಅಧಿಕಾರಿ. ಒಬ್ಬ ಸಚಿವನಿಗೆ ಮನೆ ನವೀಕರಣಕ್ಕೆ 2 ಲಕ್ಷ ನೀಡಲಾಗುತ್ತದೆ. ಆದರೆ ಇವರು ಅಂದಾಜು 65 ಲಕ್ಷ ಖರ್ಚು ಮಾಡಿ ಡಿಸಿ ಸರ್ಕಾರಿ ನಿವಾಸ ನವೀಕರಣ ಮಾಡಿಸಿದ್ದಾರೆ. ಇದಕ್ಕೆ ಯಾರು ಅನುಮತಿ ನೀಡಿದರು ಎಂದು ಪ್ರಶ್ನಿಸಿದ ಅವರು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಇದು. ಇವರು ಸೇವೆ ಮಾಡಲು ಅಲ್ಲ ಮೈಸೂರಿಗೆ ಬಂದಿದ್ದು ಎಂದರು.
ನಾನು ರೋಹಿಣಿ ಸಿಂಧೂರಿ ವಿರುದ್ಧ ಮಾಡಿದ ಆರೋಪಗಳನ್ನು ಒಳಗೊಂಡಂತೆ ಸಿಎಂಗೆ ಪತ್ರ ಬರೆದಿದ್ದೇನೆ. ಪಾರಂಪರಿಕ ಕಟ್ಟಡದ ಆವರಣದಲ್ಲಿ 16 ಲಕ್ಷ ರೂ. ಬಳಸಿ ಈಜುಕೊಳ, ಜಿಮ್ ನಿರ್ಮಿಸಿದ್ದಾರೆ. ಈಜುಕೊಳಕ್ಕೆ ಕುಡಿಯುವ ನೀರನ್ನು ಬಳಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಮನೆಯಲ್ಲಿ ಮೂರು ಕೆಇಬಿ ಮೀಟರ್ ಇವೆ. ಬೇರೆಯವರಿಗೆ 3- 4 ಸಾವಿರ ರೂ. ಬಿಲ್ ಬರುತ್ತೆ, ಹೆಚ್ಚೆಂದರೆ 7 ಸಾವಿರ ಬರಬಹುದು. ಆದರೆ ಇವರ ಮನೆಯ ವಿದ್ಯುತ್ ಬಿಲ್ ಮಾತ್ರ 50 ಸಾವಿರ ರೂಪಾಯಿ ಎಂದರು.
ರೋಹಿಣಿ ಸಿಂಧೂರಿ ಬಗ್ಗೆ ಸಿನಿಮಾ ಮಾಡುತ್ತಿದ್ದಾರಂತೆ. ಅವರ ಬಗ್ಗೆ ಸಿನಿಮಾ ಮಾಡಲಿ. ಐಎಎಸ್ ಅಧಿಕಾರಿಯೊಬ್ಬರ ಸಾವಿನ ವಿಚಾರ ಸಿಬಿಐ ವರದಿ ಆಧರಿಸಿ ನಾವೂ ಸಿನಿಮಾ ತೆಗೆಯುತ್ತೇವೆ ಎಂದು ಸಾ.ರಾ. ಮಹೇಶ್ ಹೇಳಿದರು.
ಎಲ್ಲ ಸಿನಿಮಾದಲ್ಲೂ ರಾಜಕಾರಣಿಗಳನ್ನು ಕೆಟ್ಟದಾಗಿ ತೋರಿಸಿ ಹೀಗಾಗಿದೆ. ಮೈಸೂರು ರಾಜಕಾರಣಿಗಳ್ಯಾರು ಮನುಷ್ಯರಲ್ಲವಾ? ಮೈಸೂರಿನಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಪ್ರಾಮಾಣಿಕರಲ್ಲವಾ? ಮೈಸೂರು ರಾಜಕಾರಣಿಗಳ ಕಳಂಕದ ಬಗ್ಗೆ ತನಿಖೆ ಮಾಡಬೇಕು. ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದರು.