ತಾಯಿಯ ಅಕ್ರಮ ಸಂಬಂಧದ ಬಗ್ಗೆ ತಂದೆಗೆ ತಿಳಿಸಿದ ಮಕ್ಕಳು, ಗುಟ್ಟು ರಟ್ಟಾದಾಗ ಮಕ್ಕಳಿಗೆ ಚಿತ್ರಹಿಂಸೆ ಕೊಟ್ಟ ತಾಯಿ, ಪ್ರಿಯಕರ ಅರೆಸ್ಟ್ | ಜನತಾ ನ್ಯೂಸ್
ಬೆಂಗಳೂರು : ತಾನು ಹೆತ್ತ ಮಕ್ಕಳ ಮೇಲೆಯೇ ಕೊಂಚವೂ ಕರುಣೆ ಇಲ್ಲದೆ ವಿಕೃತಿ ಮೆರೆದಿದ್ದಾಳೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪುಟ್ಟ ಕಂದಮ್ಮಗಳಿಗೆ ನರಕ ತೋರಿಸಿದ್ದಾಳೆ.
ತನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದ ಆರೋಪದಡಿ ತಾಯಿ ಹಾಗೂ ಆಕೆಯ ಸ್ನೇಹಿತನನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ.
ಆರ್.ಆರ್.ನಗರ ನಿವಾಸಿ ಜಯಮ್ಮ, ಈಕೆಯ ಸ್ನೇಹಿತ ಹೇಮಂತ್ ಬಂಧಿತ ಆರೋಪಿಗಳು. ಖಾಸಗಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದ ಜಯಮ್ಮನಿಗೆ ಅಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆಯ ಪರಿಚಯವಾಗಿ ನಂತರ ಸ್ನೇಹಕ್ಕೆ ತಿರುಗಿತ್ತು. ಜಯಮ್ಮನ ಪತಿ ಯಾವುದೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ.
ಅಮ್ಮನ ವರ್ತನೆಯಿಂದ ಇಬ್ಬರು ಹೆಣ್ಣು ಮಕ್ಕಳು ನೊಂದಿದ್ದರು. ತಂದೆ ಜೈಲಿನಿಂದ ಕರೆ ಮಾಡಿದಾಗ ಅಮ್ಮನ ವರ್ತನೆ ಬಗ್ಗೆ ಹೇಳಿದ್ದಾರೆ. ಮನೆಗೆ ಒಬ್ಬ ಅಂಕಲ್ ಬಂದು ಹೋಗುತ್ತಾರೆ ಎಂದು ತಂದೆಯ ಬಳಿ ಮಕ್ಕಳು ಹೇಳಿದ್ದಾರೆ. ಇದರಿಂದ ಕೋಪಗೊಂಡ ಗಂಡ ಫೋನ್ನಲ್ಲೇ ಹೆಂಡತಿಗೆ ವಾರ್ನಿಂಗ್ ಕೊಟ್ಟಿದ್ದಾನೆ.
ಇದರಿಂದ ಅಸಮಾನಧಾನಗೊಂಡ ಜಯಮ್ಮ ಹಾಗೂ ಪ್ರದೀಪ್ ಇಬ್ಬರು ಕಳೆದ ಎರಡು ತಿಂಗಳಿಂದ ಮಕ್ಕಳಿಗೆ ಹೊಡೆದು ಚಿತ್ರಹಿಂಸೆ ನೀಡಿದ್ದರು. ಇತ್ತೀಚೆಗೆ ತಂದೆ ಕಿರಣ್ ಕರೆ ಮಾಡಿದಾಗ ತಾಯಿ ಹಿಂಸೆ ನೀಡುತ್ತಿರುವ ಬಗ್ಗೆ ಹೇಳಿದ್ದಕ್ಕೆ ಸಿಗರೇಟಿನಿಂದ ಸುಟ್ಟು ಪ್ರದೀಪ್ ವಿಕೃತಿ ಮೆರೆದಿದ್ದ. ತಾಯಿ, ಪ್ರಿಯಕರ ಇಬ್ಬರು ಮಕ್ಕಳನ್ನು ಕಚ್ಚಿ, ಬೆಂಕಿಯಿಂದ ಸುಟ್ಟು ವಿಕೃತಿ ಮೆರೆದಿದ್ದಾರೆ.
ಈ ಮಾಹಿತಿ ಆಧರಿಸಿ ಪೊಲೀಸರು ಮನೆ ಬಳಿ ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಜಯಮ್ಮ ಹಾಗೂ ಆಕೆ ಪ್ರಿಯಕರ ಹೇಮಂತ್(27) ಅಮಾನವೀಯ ಕೃತ್ಯ ಬಯಲಾಗುತ್ತಿದ್ದಂತೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.