ರೋಹಿಣಿ ಸಿಂಧೂರಿ ಅವರ ಬಳಿ ದಾಖಲೆಗಳು ಇದೆ ಎಂದರೆ ಕ್ರಮ ಕೈಗೊಳ್ಳಲು ತಡ ಮಾಡಿದ್ದೇಕೆ? | ಜನತಾ ನ್ಯೂಸ್
ಮೈಸೂರು : ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಬಳಿ ಭೂ ಅಕ್ರಮಗಳ ದಾಖಲೆಗಳು ಇತ್ತು ಎಂದಾದರೆ ಅವರು ಕೂಡಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕಿತ್ತು. ಅದರ ಬದಲು ಮಾಧ್ಯಮಗಳ ಮುಂದೆ ದಾಖಲೆ ಬಿಡುಗಡೆ ಮಾಡಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಹೇಳಿದರು.
ಭೂ ಮಾಫಿಯ ಅಕ್ರಮ ರಾಜಕಾರಣಿಗಳಿಗೆ ಅಧಿಕಾರಿಗಳೇ ಸಹಾಯ ಮಾಡುತ್ತಾರೆ. ಅಧಿಕಾರಿಗಳು ಸಹಾ ರಿಯಲ್ ಎಸ್ಟೇಟ್ ಮಾಡ್ತಾ ಇದ್ದಾರೆ. ನಾನು ತಪ್ಪು ಮಾಡಿದ್ದರೆ ನಾನು ಜೈಲಿನ ಹಿಂದೆ ಇರುತ್ತಿದ್ದೆ. ಭೂ ಮಾಫಿಯಾ ಮಾಡುವ ಅಕ್ರಮ ರಾಜಕಾರಣಿಗಳಿಗೆ ಅಧಿಕಾರಿಗಳೇ ಸಹಾಯ ಮಾಡುತ್ತಾರೆ ಎಂದು ಅವರು ಟೀಕೆ ನಡೆಸಿದರು.
ರೋಹಿಣಿ ಸಿಂಧೂರಿಯವರು ವರ್ಗಾವಣೆಯಾದ ನಂತರ ಮಾಧ್ಯಮಗಳ ಮೂಲಕ ದಾಖಲೆ ಬಿಡುಗಡೆ ಮಾಡಿ ಪ್ರಚಾರ ತೆಗೆದುಕೊಳ್ಳುವ ಬದಲು ಮೈಸೂರಿನಲ್ಲಿದ್ದಾಗಲೇ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸುವ ಕೆಲಸ ಮಾಡಬೇಕಿತ್ತು ಎಂದರು.
ಸಿಂಧೂರಿಯವರನ್ನು ಎಲ್ಲರೂ ದಿಟ್ಟ, ಪ್ರಾಮಾಣಿಕ ಅಧಿಕಾರಿ ಎನ್ನುತ್ತಾರೆ. ಆದರೆ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಹಾಸನದಲ್ಲಿ ಸಂಘ-ಸಂಸ್ಥೆಗಳು ಸದಸ್ಯರು ಒಂದಷ್ಟು ಮಂದಿ ಸೇರಿ ಸಮಿತಿಯೊಂದನ್ನು ರಚಿಸಿಕೊಂಡು ಕೆರೆಗಳನ್ನು ಉಳಿಸುವ ಕೆಲಸ ಮಾಡಲು ಹೊರಟಿದ್ದರು. ಜಿಲ್ಲಾಧಿಕಾರಿಯಾಗಿದ್ದ ಇವರನ್ನು ಒಮ್ಮೆ ಆ ಸ್ಥಳಕ್ಕೆ ಭೇಟಿ ನೀಡಿ ಎಂದು ಕೇಳಿದಾಗ ಈಕೆ ಕಾರ್ನಿಂದ ಇಳಿಯಲೂ ಇಲ್ಲ. ಅಷ್ಟು ನಿರ್ಲಕ್ಷ್ಯ ಮಾಡಿದರು.
ಈಗ ಇಲ್ಲಿ ಭೂ ಅಕ್ರಮಗಳ ವಿರುದ್ಧ ದನಿ ಎತ್ತಿದೆ, ಕೆರೆಗಳನ್ನು ಉಳಿಸಲು ಪ್ರಯತ್ನಿಸಿದೆ ಎನ್ನುತ್ತಿದ್ದಾರೆ. ಭೂ ಮಾಫಿಯಾ ಸಖಾಸುಮ್ಮನೆ ಆಗಿಬಿಡುವುದಿಲ್ಲ. ಮಾಫಿಯಾ ಮಾಡುವವರಿಗೆ ಅಧಿಕಾರಿಗಳ ಸಹಕಾರವೂ ಇರುತ್ತದೆ. ಕೆಲವರು ಮಾಫಿಯಾಗೆ ಸಹಾಯ ಮಾಡಿದರೆ ಇನ್ನು ಕೆಲವರು ತಾವೇ ಅದರಲ್ಲಿ ಭಾಗಿಯಾಗಿರುತ್ತಾರೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಭೂ ಅಕ್ರಮದ ಸಂಬಂಧ ತ.ಮ.ವಿಜಯಭಾಸ್ಕರ್ ಅವರು ಸರ್ಕಾರಕ್ಕೆ ಬಹಳ ಹಿಂದೆಯೇ ವರದಿ ನೀಡಿದ್ದಾರೆ. ಇಂತಹ ಎಷ್ಟೋ ತಜ್ಞರ ವರದಿಗಳು ಕಡತಕ್ಕೆ ಸೀಮಿತವಾಗಿವೆ. ಸರ್ಕಾರ ಈ ರೀತಿ ಮಾಡುವುದು ತಪ್ಪು. ಇಂತಹ ಪ್ರಮುಖ ವರದಿಗಳನ್ನು ತಕ್ಷಣವೇ ಜಾರಿ ಮಾಡಿ ಅಕ್ರಮ ತಡೆಯಬೇಕು. ಈಗ ಮೈಸೂರಿನಲ್ಲಿ ಭೂ ಅಕ್ರಮ ನಡೆಯುತ್ತಿರುವ ಬಗ್ಗೆ ತನಿಖೆ ನಡೆಯಬೇಕು, ತ.ಮ.ವಿಜಯಭಾಸ್ಕರ್ ವರದಿ ಜಾರಿಯಾಗಬೇಕು. ಹಗರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆದು ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಭಿಪ್ರಾಯಪಟ್ಟರು.
ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರ ಆನ್ಲೈನ್ ಕ್ಯಾಂಪೇನ್ ನಡೆಯುತ್ತಿದೆ. ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ನೇಮಿಸುವಂತೆ ಒತ್ತಾಯಿಸಿ, ಚೇಂಜ್ ಆರ್ಗ್ ಸಂಸ್ಥೆಯಿಂದ "ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ" ಅಭಿಯಾನ ಆರಂಭವಾಗಿದೆ. ಈಗಾಗಲೇ ಸುಮಾರು 26ಸಾವಿರ ಜನರಿಂದ ಸಹಿ ಸಂಗ್ರಹವಾಗಿದ್ದು, ರೋಹಿಣಿ ಸಿಂಧೂರಿ ಅವರನ್ನು ಮರಳಿ ಮೈಸೂರಿಗೆ ನೇಮಿಸುವಂತೆ ಮನವಿ ಮಾಡಿದೆ. ಚೇಂಜ್ ಆರ್ಗ್ ಸಂಸ್ಥೆ, ಸಹಿ ಸಂಗ್ರಹ ಅಭಿಯಾನದ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ಮನವಿ ಮಾಡಿದೆ ಎಂಬ ಮಾಹಿತಿ ದೊರೆತಿದೆ ಎಂದರು.
ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಅವರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಡಿಯೋದಲ್ಲಿ ಸಾ.ರಾ.ಮಹೇಶ್ ಮತ್ತು ರಾಜೀವ್ ವಿರುದ್ಧ ಆರೋಪ ಕೇಳಿಬಂದಿದೆ. ತನ್ನ ವರ್ಗಾವಣೆಗೆ ಇವರಿಬ್ಬರ ಷಡ್ಯಂತ್ರವಿದೆ ಎಂದು ದೂರಿದ್ದಾರೆ. ಅಲ್ಲದೇ ಸಾ.ರಾ.ಮಹೇಶ್ ಮತ್ತು ರಾಜೀವ್ ಭೂ ಹಗರಣದಲ್ಲಿ ಭಾಗಿದ್ದಾರೆ ಎನ್ನುವ ಮಾತುಗಳು ವೈರಲ್ ಆದ ಆಡಿಯೋದಲ್ಲಿ ಕೇಳಿಬಂದಿವೆ.