ಕೊರೊನಾ ತಂದವರು ಯಾರು? ನಾವಾ?. ಬಿಜೆಪಿ ಸರ್ಕಾರಕ್ಕೆ ಜನರು ಉಗಿಯುತ್ತಿದ್ದಾರೆ | ಜನತಾ ನ್ಯೂಸ್
ಚಿತ್ರದುರ್ಗ : ಕೋವಿಡ್ ನಿಯಂತ್ರಣದಲ್ಲಿ ವೈಫಲ್ಯ ಹಾಗೂ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.
ಹಿರಿಯೂರಲ್ಲಿ ಮಾತನಾಡಿದ ಅವರು, "ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯಲ್ಲಿ ಎಲ್ಲದಕ್ಕೂ ಸರದಿ ಸಾಲು ನಿಲ್ಲುವಂತಾಯಿತು. ಬಿಜೆಪಿ ಸರ್ಕಾರ ಇನ್ನೇನು ಜನರನ್ನು ಕಾಪಾಡಿದೆ. ಔಷಧಿ, ಶವದಲ್ಲೂ ಹಣ ಲೂಟಿ ಮಾಡುತ್ತಿದೆ. ದೇಶಕ್ಕೆ ಕೊರೊನಾ ತಂದವರು ಯಾರು? ನಾವಾ?. ಬಿಜೆಪಿ ಸರ್ಕಾರಕ್ಕೆ ಜನರು ಉಗಿಯುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ ಹೆಣ ಸುಡೋಕೂ ಸರದಿ, ಆಸ್ಪತ್ರೆ ಸೇರೋಕು ಸರದಿ,ಔಷಧಿಗೂ ಸರದಿ, ಲಸಿಕೆ ಪಡೆಯಲೂ ಸರದಿ ಸಾಲು ನಿಲ್ಲುವಂತಾಯ್ತು ಬಿಜೆಪಿ ಸರ್ಕಾರ ಇನ್ನೇನು ಜನರನ್ನು ಕಾಪಾಡಿದೆ ? ಹೆಣದಲ್ಲೂ ಹಣ, ಔಷಧಿಯಲ್ಲೂ ಹಣ ಲೂಟಿ ಹೊಡೆಯುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಇಂಧನ ಬೆಲೆ ಖಂಡಿಸಿ ಜೂನ್ 15 ರಿಂದ ಐದು ದಿನ ಐದು ಸಾವಿರ ಕಡೆ ಜನಪರ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ ಡಿಕೆಶಿ, ಸಿಎಂ ಬಿಎಸ್ ವೈ, ಪಿಎಂ ಮೋದಿಗೆ ನನ್ನ ಪ್ರಶ್ನೆ, ತೈಲ ಬೆಲೆ ಏರಿಸಿದಂತೆ ರೈತರಿಗೆ ಬೆಂಬಲ ಬೆಲೆ ನೀಡುವುದು ಏರಿಸಿದ್ದೀರಾ? ರೈತರು ಬೆಳೆದ ಬೆಳೆಯ ಬೆಲೆ ಏರಿಸಿದ್ದೀರಾ? ಸರ್ಕಾರಿ, ಖಾಸಗಿ, ದಿನಗೂಲಿ ನೌಕರರ ಸಂಬಳ ಏರಿಸಿದ್ದೀರಾ?. ಇಲ್ಲ.
ಮನ್ರೇಗಾ ಯೋಜನೆಯ ಕೂಲಿ ಹಣವನ್ನೂ ಹೆಚ್ಚಳ ಮಾಡಿಲ್ಲ. ಕೇವಲ ಇವರ ಜೇಬು ಮಾತ್ರ ತುಂಬಬೇಕಾಗಿದೆ ಅಷ್ಟೆ. ನಾವು, ಜನಸಾಮಾನ್ಯರು ಸೇರಿ ಈ ಸರ್ಕಾರ ಕಿತ್ತೊಗೆಯಬೇಕು. ನಾಳೆ ಗ್ರಾಮ ಮಟ್ಟದಲ್ಲಿ ನಡೆಯುವ ಹೋರಾಟದಲ್ಲಿ ಮುಖಂಡರು ಭಾಗಿಯಾಗಬೇಕು. ಕಡ್ಡಾಯವಾಗಿ ಕಾಂಗ್ರೆಸ್ ಮುಖಂಡರು ಜನರಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.