ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ: ಪ್ರಹ್ಲಾದ್ ಜೋಶಿ | ಜನತಾ ನ್ಯೂಸ್
ಹುಬ್ಬಳ್ಳಿ : ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟಪಡಿಸಿದ್ದು, ಆ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಚರ್ಚೆಯನ್ನು ಯಾರೂ ಹುಟ್ಟು ಹಾಕಬಾರದು. ಯಾರಾದ್ರೂ ದೆಹಲಿಗೆ ಹೋಗಿಬಿಟ್ಟರೆ ಭಿನ್ನಮತ ಹೇಗಾಗುತ್ತೆ. ರಾಜ್ಯ ಸರ್ಕಾರ ಎಲ್ಲ ರೀತಿಯಿಂದ ಒಳ್ಳೆ ಕೆಲಸ ಮಾಡ್ತಿದೆ. ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡ್ತಿದಾರೆ. ಈ ವಯಸ್ಸಿನಲ್ಲಿಯೂ ಕೋವಿಡ್ನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ರಾಜಕಾರಣದಲ್ಲಿ ಬರೀ ಅಧಿಕಾರವೊಂದೇ ಅಂತಿಮವಲ್ಲ. ಅಧಿಕಾರದಲ್ಲಿ ಇರೋರು ವಿಶೇಷವಾಗಿ ಜನರ ಕಣೀರನ್ನು ಒರೆಸೋದನ್ನು ಪ್ರಥಮ ಆದ್ಯತೆಯನ್ನಾಗಿಸಿಕೊಳ್ಳಬೇಕು. ನಾಯಕತ್ವ ಬದಲಾವಣೆ ಚರ್ಚೆಗೆ ಎಲ್ಲರೂ ಪೂರ್ಣ ವಿರಾಮ ಹಾಡಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ ಅವರು, ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದಾಗಿ ನನಗೆ ತಿಳಿಸಿದ್ದಾರೆ. ಬೇರೆಯವರು ಯಾರು ದೆಹಲಿಗೆ ಹೋಗಿದ್ದಾರೆ. ಯಾಕೆ ಹೋಗಿದ್ದಾರೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಜನಪ್ರತಿನಿಧಿಗಳಿಗೆ ಅಧಿಕಾರವೊಂದೇ ಅಲ್ಲ, ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಇದೀಗ ನಮ್ಮೆಲ್ಲರ ಮುಂದೆ ಇರುವುದು ಕೋವಿಡ್ ನಿಯಂತ್ರಣವಷ್ಟೇ ಎಂದು ಹೇಳಿದರು.