ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಮುಂದೆಯೇ ಪಿಡಿಒಗೆ ಮಹಿಳೆ ತರಾಟೆ! | ಜನತಾ ನ್ಯೂಸ್
ಶಿವಮೊಗ್ಗ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮುಂದೆಯೇ ಮಹಿಳೆಯೊಬ್ಬಳು ಗ್ರಾಮ ಪಂಚಾಯಿತಿ ಪಿಡಿಒರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.
ಹಸೂಡಿಯಲ್ಲಿ ಗ್ರಾ.ಪಂ ಮಟ್ಟದ ಕಾರ್ಯಪಡೆ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ಕರೊನಾ ಸೋಂಕು ನಿಯಂತ್ರಣದ ಬಗ್ಗೆ ಪಿಡಿಓ ಮಾಹಿತಿ ನೀಡುತ್ತಿದ್ದರು. ಸೋಂಕು ನಿಯಂತ್ರಣಕ್ಕೆ ಮನೆ ಮನೆಗೆ ತೆರಳಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ ಎಂದು ಪಿಡಿಓ ಹೇಳಿದಾಗ ಗ್ರಾಮದ ಮಹಿಳೆ ಮೀನಮ್ಮ ಆಕ್ಷೇಪ ವ್ಯಕ್ತಪಡಿಸಿದರು.
ಕೊರೊನಾ ಪಾಸಿಟಿವ್ ಪ್ರಕರಣಗಳು, ಸ್ಯಾನಿಟೈಸರ್ ಮಾಡಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಂತಯೇ, ಸಭೆಗೆ ಬಂದಿದ್ದ ಮಹಿಳೆ ಎದ್ದು ನಿಂತು ಸಚಿವರಿಗೆ ತಪ್ಪು ಮಾಹಿತಿ ನೀಡಬೇಡಿ, ಪಾಸಿಟಿವ್ ಬಂದ ಮನೆಗೆ ಎಲ್ಲಿ ಸ್ಯಾನಿಟೈಸರ್ ಮಾಡಿದ್ದೀರಿ, ಫೋನ್ ಮಾಡಿ ಹೇಳಿದ್ರೂ ಸಹ ಮಾಡಿಲ್ಲ. ಸುಳ್ಳು ಹೇಳಬೇಡಿ ಎಂದು ಏರು ಧ್ವನಿಯಲ್ಲಿ ಮಾತನಾಡಿದರು.
ಮಹಿಳೆಯ ತರಾಟೆ ಕಂಡು "ಆಯ್ತು ಸುಮ್ಮನಿರಮ್ಮ ನಾನು ಕೇಳುತ್ತೇನೆ, ನೀನೇ ಮಾತನಾಡಿದರೆ ಹೇಗೆ" ಎಂದು ಸಚಿವ ಈಶ್ವರಪ್ಪ ಮಹಿಳೆಯನ್ನು ಸಮಾಧಾನಪಡಿಸಿದರು.
ನಂತರ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳನ್ನು ವಿವರಿಸಿದರು. ಈ ವೇಳೆ ಕೋವಿಡ್ ಪಾಸಿಟಿವ್ ಬಂದು ಗುಣಮುಖರಾದವರ ಹತ್ತಿರ ಬರಲು ಜನ ಹೆದರುತ್ತಾರೆ. ಹಾಗೇ ಕೆಲಸಕ್ಕೂ ಕರೆಯುತ್ತಿಲ್ಲ. ಇದರಿಂದ ಬಡ ವರ್ಗದವರಿಗೆ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಶಾ ಕಾರ್ಯಕರ್ತೆಯೊಬ್ಬರು ವಿವರಿಸಿದರು.
ಈ ಕುರಿತು ಸಚಿವರು ಪ್ರತಿಕ್ರಿಯೆ ನೀಡಿ, ಕೋವಿಡ್ ಕುರಿತು ಗ್ರಾಮೀಣ ಭಾಗದ ಜನರಿಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕು. ಅಲ್ಲದೆ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ಟಾಸ್ಕ್ ಫೋರ್ಸ್ ಸಮಿತಿಗೆ ಸೂಚಿಸಿದರು. ಸಭೆಯ ಬಳಿಕ ಗ್ರಾಮದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿಂದ ಮನರೇಗಾ ಯೋಜನೆಯಡಿ ಗದ್ದೆಯ ಕಾಲುವೆಯನ್ನ ಸ್ವಚ್ಛಗೊಳಿಸುವ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.