ಪ್ರಿಯತಮನಿಗಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಂಜಿನಿಯರಿಂಗ್ ಪದವಿಧರೆ! | ಜನತಾ ನ್ಯೂಸ್
ಬೆಂಗಳೂರು : ಯತಮನಿಗಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆಂಧ್ರ ಪ್ರದೇಶ ಮೂಲದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶ ಮೂಲದ ಶ್ರೀಕಾಕುಳಂನ ನಿವಾಸಿ ರೇಣುಕಾ(25) ಬಂಧಿತ ಆರೋಪಿತೆ.
ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಆಕೆ ಗಾಂಜಾ ಪೂರೈಕೆ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಆಂಧ್ರಪ್ರದೇಶ ಮೂಲದ ರೇಣುಕಾ ಹೆಸರಿನ ಯುವತಿ ಚೆನ್ನೈನಲ್ಲಿ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಸಿದ್ಧಾರ್ಥ್ ಹೆಸರಿನ ಯುವಕನೊಂದಿಗೆ ಪ್ರೀತಿ ಹುಟ್ಟಿತ್ತು. ಪ್ರೀತಿ ವಿಚಾರದಲ್ಲಿ ಮನೆಯವರೊಂದಿಗೆ ಜಗಳ ಆಡಿದ ರೇಣುಕಾ ಸಿದ್ಧಾರ್ಥ್ ಮಾತಿಗೆ ಮರುಳಾಗಿದ್ದಳು. ಅದಾದ ಮೇಲೆ ಬೆಂಗಳೂರಿಗೆ ಬಂದಿದ್ದ ಸಿದ್ದಾರ್ಥ್ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ. ಹೊಸ ಬಿಜಿನೆಸ್ ಸ್ಟಾರ್ಟ್ ಮಾಡಿದ್ದೇನೆ, ಒಳ್ಳೆಯ ಲಾಭವಿದೆ, ನೀನೂ ಬಂದು ನನ್ನ ಜತೆ ಕೈ ಜೋಡಿಸು ಎಂದು ರೇಣುಕಾಳಿಗೆ ಬ್ರೈನ್ ವಾಶ್ ಮಾಡಿದ್ದ.
ರೇಣುಕಾ ಬೆಂಗಳೂರಿಗೆ ಬಂದು ಸಿದ್ಧಾರ್ಥ್ ಜತೆ ಗಾಂಜಾ ಮಾರಾಟಕ್ಕೆ ಇಳಿದಿದ್ದಳು. ಸಿದ್ಧಾರ್ಥ್ ಗಾಂಜಾ ತರಿಸಿಕೊಂಡು ಕಸ್ಟಮರ್ ಹುಡುಕುತ್ತಿದ್ದ. ನಂತರ ರೇಣುಕಾಳನ್ನು ರಸ್ತೆ ಪಕ್ಕದಲ್ಲಿರುವ ಓಯೋ ರೂಂಗೆ ಕಳುಹಿಸಿ ಅಲ್ಲಿಗೆ ಕಸ್ಟಮರ್ ಕಳುಹಿಸಿ, ರೇಣುಕಾಳಿಂದ ಗಾಂಜಾ ಮಾರಿಸುತ್ತಿದ್ದ.
ಐಷಾರಾಮಿ ಜೀವನಕ್ಕಾಗಿ ಪ್ರಿಯತಮನ ಮಾತು ಕೇಳಿ ಲಾಕ್ ಡೌನ್ ನಲ್ಲಿ ಬೆಂಗಳೂರಿಗೆ ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಪೊಲೀಸರ ಎದುರು ಆರೋಪಿತೆ ತಪ್ಪೊಪ್ಪಿಕೊಂಡಿದ್ದಾಳೆ.
ಪ್ರಿಯತಮೆಯ ಬಂಧನದ ಸುದ್ದಿ ಹೊರಬೀಳುತ್ತಿದ್ದಂತೆ ಪ್ರಿಯಕರ ಸಿದ್ದಾರ್ಥ್ ಹಾಗೂ ಸುಧಾಂಶು ತಲೆಮರೆಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಸದಾಶಿವ ನಗರ ಪೊಲೀಸರು ಬಲೆ ಬೀಸಿದ್ದಾರೆ.