ಜೂನ್ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭ, ಆದರೆ ಷರತ್ತು ಅನ್ವಯ! | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅನ್ಲಾಕ್ 2.0ಗೆ ಸಿದ್ಧೆ ನಡೆಸಿದ್ದು, ಬೆಂಗಳೂರಿನಲ್ಲಿ ಒಂದು ತಿಂಗಳಿಗಿಂತ ಹೆಚ್ಚು ದಿನಗಳ ಕಾಲ ಸಂಚಾರ ನಡೆಸದೇ ಸ್ಥಗಿತಗೊಂಡಿದ್ದ ಬಿಎಂಟಿಸಿ ಸಂಚಾರ ಆರಂಭವಾಗಲಿದೆ.
ಮೊದಲ ಹಂತದ ಲಾಕ್ಡೌನ್ ಸಡಿಲಿಕೆ ವೇಳೆ ಸಾರ್ವಜನಿಕ ಸಾರಿಗೆಗೆ ವಿನಾಯಿತಿ ಬೇಡ ಅಂತ ಬಿಬಿಎಂಪಿ ಹೇಳಿತ್ತು. ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಿದ್ರೆ ಸೋಂಕು ಹೆಚ್ಚಳವಾಗಲಿದೆ. ಹೀಗಾಗಿ ಸದ್ಯಕ್ಕೆ ಬಸ್ ಸಂಚಾರಕ್ಕೆ ಅನುಮತಿ ಬೇಡ ಎಂದು ಸರ್ಕಾರಕ್ಕೆ ಪಾಲಿಕೆ ಮನವಿ ಕೂಡ ಮಾಡಿತ್ತು. ಆದ್ರೀಗ ಒತ್ತಡ ಹೆಚ್ಚಾದ ಕಾರಣ, ಬೇಡಿಕೆಗೆ ಬಿಬಿಎಂಪಿ ಮಣಿದು ಸೋಮವಾರದಿಂದ ನಗರದಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡಲು ನಿರ್ಧರಿಸಿದೆ.
ಮುಖ್ಯ ಆಯುಕ್ತ ಗೌರವ್ ಗುಪ್ತಾ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಅಧಿಕಾರಿಗಳ ಅಭಿಪ್ರಾಯ ಪಡೆದು ಷರತ್ತುಬದ್ಧ ಅನುಮತಿ ನೀಡಲು ಬಿಬಿಎಂಪಿ ಒಪ್ಪಿಗೆ ನೀಡಿದೆ.
ಷರತ್ತು -
- ಶೇಕಡಾ 50ರಷ್ಟು ಬಸ್ಗಳನ್ನು ಮಾತ್ರ ರಸ್ತೆಗಿಳಿಸಲು ಅನುಮತಿ
- ಬಸ್ಗಳಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರ ಸಂಚಾರಕ್ಕೆ ಅನುಮತಿ
- ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಕಡ್ಡಾಯ
- ಬಸ್ಗಳಲ್ಲಿ ಆಸನಗಳ ಮಧ್ಯೆ ಅಂತರವಿಟ್ಟುಕೊಂಡು ಕುಳಿತುಕೊಂಡು ಪ್ರಯಾಣಿಸಲು ಅವಕಾಶ
- ನಿಂತುಕೊಂಡು ಪ್ರಯಾಣಿಸೋದಕ್ಕೆ ಅವಕಾಶ ಇಲ್ಲ
- ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ಇಲಾಖೆ ಮತ್ತು ಬಿಎಂಟಿಸಿ ಅಧಿಕಾರಿಗಳಿಗೆ
- ಮೆಜೆಸ್ಟಿಕ್, ಟರ್ಮಿನಲ್ಸ್, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ
- ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ 7 ಗಂಟೆ ಒಳಗೆ ಬಸ್ ಸಂಚಾರ ನಿಲ್ಲಿಸಬೇಕು