ಮಹಾನ್ ಹರಿಶ್ಚಂದ್ರರಾ? ಯಾವ ಟೈಂನಲ್ಲಿ ಕತ್ತು ಕೊಯ್ಯಬೇಕು ಅನ್ನೋದು ಸಿದ್ದರಾಮಯ್ಯ ಜಾಯಮಾನ: ಹೆಚ್ ಡಿ ಕುಮಾರಸ್ವಾಮಿ | ಜನತಾ ನ್ಯೂಸ್
ಕೋಲಾರ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅರೇನು ಮಹಾನ್ ಹರಿಶ್ಚಂದ್ರರಾ? ಅವರಿಂದ ರಾಜಕೀಯ ಮಾಡೋದನ್ನು ನಾನು ಕಲಿಯಬೇಕಾಗಿಲ್ಲ ಎಂದು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಕೋಲಾರದಲ್ಲಿ ಮಾತನಾಡಿದ ಅವರು, ಕೂಡಲೇ ಕೊರೊನಾ ವಿಚಾರವಾಗಿ ಕಲಾಪ ಕರೆಯಬೇಕು. ಬಿಜೆಪಿ ಪಕ್ಷದ ಶಾಸಕರಲ್ಲೇ ಹೊಂದಾಣಿಕೆ ಇಲ್ಲ. ನಾಯಕತ್ವ ಗೊಂದಲ ಒಂದು ದುರಾದೃಷ್ಟಕರ ವಿಚಾರವಾಗಿದೆ ಎಂದರು. ಮುಖ್ಯಮಂತ್ರಿ ಆಗುವುದಕ್ಕೆ ಕೆಲವರು ಸೂಟ್ ಹೊಲಿಸಿಕೊಂಡಿದ್ದಾರೆ. ಕಾಂಗ್ರೆಸ್ನಲ್ಲೂ ಸೂಟ್ ಹೊಲಿಸಿಕೊಂಡು ರೆಡಿ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಸಿದ್ದರಾಮಯ್ಯ ಅವರು ಏನ್ ಮಹಾನ್ ಹರಿಶ್ಚಂದ್ರರಾ? ಬೆಂಗಳೂರು ನಗರದಲ್ಲಿ 400 ಎಕರೆ ರೀಡೋ ಮಾಡಿದ್ರಲ್ಲಾ, ಕೆಂಪಣ್ಣ ಅಯೋಗ ವರದಿ ಮಾಡಿದ್ರಲ್ಲ, ಏನಾಯ್ತು ಅದು? ಲೂಟಿ ಹೊಡೆದ್ರಲ್ಲಾ 400-500 ಕೋಟಿ ರೂಪಾಯಿನಾ, ಅವರೇನ್ ಸಾಚಾನ? ಸಿದ್ದರಾಮಯ್ಯ ಅವರಿಂದ ರಾಜಕೀಯ ಮಾಡೋದನ್ನ ನಾನು ಕಲಿಯಬೇಕಿಲ್ಲ ಎಂದು ಎಚ್. ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
2008ರ ಚುನಾವಣೆಯಲ್ಲಿ ನೀವೆ ಯಡಿಯೂರಪ್ಪ ಅವರ ಬಳಿ ಹಣ ಪಡೆದಿದ್ದೀರಾ? ಇತಿಹಾಸ ಇದೆ, ನಿಮ್ಮ ಜಾಯಮಾನ ಅದು. 2008ರಲ್ಲಿ ಸಿದ್ದರಾಮಯ್ಯ ಆಪ್ತರೊಬ್ಬರು ಹಣ ಪಡೆದಿದ್ದಾರೆ. ನಿಮ್ಮ ಆಪ್ತರು ಎಷ್ಟು ಹಣ ಪಡೆದಿದ್ದರು. ಆಪರೇಷನ್ ಕಮಲದಲ್ಲಿ ಹಣವನ್ನು ಪಡೆದಿದ್ದರು. ಯಾವ ಯಾವ ಸಂಧರ್ಭದಲ್ಲಿ ಯಾರ ಕುತ್ತಿಗೆ ಕೊಯ್ದಿರಿ ಅಂತಾ ಗೊತ್ತು. ನನ್ನ ಪಕ್ಷದ ಬಗ್ಗೆಯಾಗಲಿ, ನನ್ನ ಬಗ್ಗೆಯಾಗಲಿ ಲಘುವಾಗಿ ಮಾತಾಡಿದ್ರೆ ಹುಷಾರ್ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ಎಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ಯಾರು ಯಾರು ಯಾವ ಟೈಂನಲ್ಲಿ ಹೃದಯದಲ್ಲಿ ಇರುತ್ತಾರೆ ಅಂತ ನನಗೆ ಗೊತ್ತಿದೆ. ಬೇಕಾದಾಗ ಹೃದಯದಲ್ಲಿ ಇಟ್ಟುಕೊಳ್ಳುತ್ತಾರೆ. ಬೇಡವೆಂದಾಗ ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡುತ್ತಾರೆ" ಎಂದು ಟಾಂಗ್ ನೀಡಿದರು.
"ಬಿಜೆಪಿಯವರು ದಂಗೆ ನಡೆಸುವ ಕಾಲವಲ್ಲ ಇದಲ್ಲ. ಜನರು ಕಷ್ಟದಲ್ಲಿ ಇದ್ದಾರೆ. ಸರ್ಕಾರ ತನ್ನ ಅಸ್ಥಿರತೆ ತೋರಿಸುತ್ತ ಕುಳಿತುಕೊಂಡರೆ ಜನರ ಬದುಕು ಏನಾಗಬೇಕು?. ಸ್ವಾಮೀಜಿಗಳು ಧಾರ್ಮಿಕ ವಿಚಾರದಲ್ಲಿ ಆಸಕ್ತಿ ವಹಿಸಬೇಕು. ನಾಡಿನ ಜನರ ಪರವಾಗಿ ಸ್ವಾಮೀಜಿಗಳು ಇರಬೇಕು" ಎಂದರು.