ಮುಖ್ಯ ಮಂತ್ರಿ ಹುದ್ದೆಗೆ ನಮ್ಮ ಜನಾಂಗದ ಮೂವರಿದ್ದಾರೆ, ಅವರಿಗೇ ನನ್ನ ಬೆಂಬಲ: ಜಯಮೃತ್ಯುಂಜಯ ಶ್ರೀ | ಜನತಾ ನ್ಯೂಸ್
ದಾವಣಗೆರೆ : ಸಿಎಂ ಸ್ಥಾನದ ರೇಸ್ ನಲ್ಲಿ ನಮ್ಮ ಮೂರು ಹುಲಿಗಳಿವೆ ಎಂದು ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ದಾವಣಗೆರೆಯಲ್ಲಿ ಮಾತನಾಡಿ, ಬಿಜೆಪಿ ಹೈಕಮಾಂಡ್ಗೆ ಎಲ್ಲವೂ ಗೊತ್ತಿದೆ. ರೇಸ್ನಲ್ಲಿಯೂ ನಮ್ಮವರು ಓಡಾಡುತ್ತಿದ್ದಾರೆ. ರೇಸ್ನಲ್ಲಿ ಓಡುವವರಿಗೆ ನಾನು ಬೆಂಬಲಿಸುತ್ತೇನೆ. ಯಾರೋ ಒಬ್ಬರ ಪರ ಸ್ವಾಮೀಜಿಯಾಗಿ ಮಾತನಾಡಲ್ಲ, ಎಂದರು.
ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಜೊತೆ ಮಾತನಾಡಿದ್ದೇನೆ. ಅವಶ್ಯಕತೆ ಬಿದ್ದರೆ ದೆಹಲಿಗೆ ಕರೆಯಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ನಾಯಕರು ತುಂಬಿ ತುಳುಕುತ್ತಿದ್ದಾರೆ. ಈ ಸಮುದಾಯದ ಏಕ ವ್ಯಕ್ತಿ ಮೇಲೆ ಅವಲಂಬಿತ ಸಮಾಜ ಅಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ನಾನು ಮಾತನಾಡಲ್ಲ. ಉತ್ತರ ಕರ್ನಾಟಕ ಮೂಲದ ಲಿಂಗಾಯತ ಸಮುದಾಯದವರನ್ನು ಸಿಎಂ ಮಾಡಿ ಎಂಬುದನ್ನು ಒತ್ತಿ ಹೇಳುವುದಾಗಿ, ತಿಳಿಸಿದರು.
ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನ ನೀಡಿ ಎಂಬ ಹೆಚ್.ವಿಶ್ವನಾಥ್ ಹೇಳಿಕೆ ನೀಡಿರುವುದು ಉತ್ತರ ಕರ್ನಾಟಕದ ಮೇಲಿನ ಅಭಿಮಾನದಿಂದ ಹೇಳಿರಬಹುದು.
ಪ್ರಧಾನಿ ಮನಸ್ಸು ಗೆದ್ದಿರುವ ವ್ಯಕ್ತಿ ಯಾರು ಬರುತ್ತಾರೆ ಬರಲಿ. ಕೋಟ್ಯಂತರ ಜನರ ಮನಸ್ಸು ಗೆದ್ದವರು, ಕಳಂಕರಹಿತರು, ಪ್ರಾಮಾಣಿಕ, ಕುಟುಂಬ ಹಸ್ತಕ್ಷೇಪ ಇಲ್ಲದವರು ಬರಲಿ. ನಮ್ಮ ಪಾದಯಾತ್ರೆ ಮುಗಿದ ಮೇಲೆ ನಮ್ಮಲ್ಲೂ ನಾಯಕರಿದ್ದಾರೆ. ನಾವೆಲ್ಲ ಯಡಿಯೂರಪ್ಪ ಒಬ್ಬರೇ ನಾಯಕ ಎಂದುಕೊಂಡಿದ್ದೆವು. ಆದರೆ ನಮ್ಮಲ್ಲೂ ಹುಲಿಗಳಿವೆ ಎಂದರು.
ರಾಜಕಾರಣದಲ್ಲಿ ಅದನ್ನು ಮಾಡಬೇಕು ಇದನ್ನು ಮಾಡಬೇಕು ಎಂದು ಹೇಳುವ ಅಧಿಕಾರ ಯಾವ ಮಠಾಧೀಶರಿಗೂ ಇಲ್ಲ, ರಾಜಕಾರಣದಲ್ಲಿ ಮೂಗು ತೂರಿಸುವುದು ಸರಿಯಲ್ಲ. ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹರಿಹರ ಪಂಚಮಸಾಲಿ ಮಠದ ವಚನಾನಂದ ಶ್ರೀಗಳಿಗೆ ಟಾಂಗ್ ನೀಡಿದರು.