ಮೇಕೆದಾಟು ಯೋಜನೆ : ಪ್ರಧಾನಿಯಿಂದ ಭಾಷಾ ದುರಭಿಮಾನಿ ಬಿಜೆಪಿ ಸಂಸದರು ಉತ್ತರ ಪಡೆಯಬೇಕು - ಎಚ್ಡಿಕೆ | ಜನತಾ ನ್ಯೂಸ್
ಬೆಂಗಳೂರು : ಮೇಕೆದಾಟು ಡ್ಯಾಂಗೆ ಅನುಮತಿ ನೀಡಬಾರದೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವ ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ ಯೋಜನೆ ತಡೆಯಲು ಪ್ರಧಾನಿ ಮೇಲೆ ಒತ್ತಡ ಹೇರುತ್ತಾ ಬಂದಿರುವುದಾಗಿ ಹೇಳಿದ್ದಾರೆ. ಕೇಂದ್ರವು ತಮಿಳುನಾಡಿನ ಒತ್ತಡಕ್ಕೆ ಮಣಿದು ಅನುಮತಿ ಮುಂದೂಡತ್ತಾ ಬಂದಿದ್ದೇ ಆದರೆ ಅದು ಕನ್ನಡಿಗರಿಗೆ ಬಗೆದ ದ್ರೋಹ, ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ತಂದು ನನ್ನ ಸರ್ಕಾರ ಧೈರ್ಯ ಪ್ರದರ್ಶಿಸಿತ್ತು. ಪರಿಸರ ಅನುಮತಿ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ವರೆಗೆ ಅನುಮತಿ ಸಿಕ್ಕಿಲ್ಲ. ಇತ್ತ, ಯೋಜನೆ ವಿರುದ್ಧ ಅರ್ಜಿಗಳು ಸಲ್ಲಿಕೆಯಾಗುತ್ತಾ ಬಂದವು. ಇದೆಲ್ಲ ಗಮನಿಸಿದರೆ ಯೋಜನೆ ತಡೆಯಲು ತಮಿಳುನಾಡು–ಕೇಂದ್ರ ಷಡ್ಯಂತ್ರ ಹೆಣೆದ ಅನುಮಾನ ಮೂಡುತ್ತಿದೆ, ಎಂದು ಹೇಳಿದ್ದಾರೆ.
ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಒತ್ತಡ ಹೇರಿತ್ತೇ? ಅದರ ಮಾತು ಕೇಳಿ ಅನುಮತಿ ವಿಳಂಬ ಮಾಡಲಾಯಿತೇ? ಈ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು. ಇಲ್ಲವೇ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ "ಭಾಷಾ ದುರಭಿಮಾನಿ ಬಿಜೆಪಿ ಸಂಸದರು" ಪ್ರಶ್ನೆ ಮಾಡಿ ಉತ್ತರ ಪಡೆದುಕೊಂಡು ಬರಬೇಕು. ಇಲ್ಲವೇ ಬಾಕಿ ಇರುವ ಪರಿಸರ ಅನುಮತಿಯನ್ನು ಶೀಘ್ರ ನೀಡಬೇಕು, ಎಂದು ಜೆಡಿಎಸ್ ಹಿರಿಯ ನಾಯಕ ಎಚ್ಡಿಕೆ ಅವರು ರಾಜ್ಯ ಬಿಜೆಪಿ ಸಂಸದರನ್ನು ಒತ್ತಾಯಿಸಿ ಸಾಮಾಜಿಕ ಮದ್ಯಮಗಳಲ್ಲಿ ಹೇಳಿದ್ದಾರೆ.