ಪತ್ನಿ ಸಾವಿನ ಗಳಿಗೆ ಸರಿಯಿಲ್ಲ, 3 ತಿಂಗಳು ಮನೆಗೆ ಬರಬೇಡ: ಪತ್ನಿಯ ಸಂಬಂಧಿಕರಿಂದಲೇ ಮನೆಗೆ ಕನ್ನ ಆರೋಪ | ಜನತಾ ನ್ಯೂಸ್
ಬೆಂಗಳೂರು : ಕರೊನಾದಿಂದ ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿ ಟೆಕ್ಕಿ ಪತಿ ಇದ್ದರೆ, ಪತ್ನಿಯ ಸಂಬಂಧಿಕರು ಆಕೆಯ ಆಸ್ತಿ ಕಬಳಿಸುವ ಸಂಚು ರೂಪಿಸುತ್ತಿರುವ ಅಮಾನವೀಯ ಸಂಗತಿಯೊಂದು ಬೆಳಕಿಗೆ ಬಂದಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಟೆಕ್ಕಿ ಪ್ರವೀಣ್ ಹಾಗೂ ಪತ್ನಿ ನಿಮಿತಾ ವೃತ್ತಿಯಲ್ಲಿ ಇಬ್ಬರೂ ಸಾಫ್ಟ್ವೇರ್ ಇಂಜಿನಿಯರ್ಸ್. ಪ್ರವೀಣ್ ಕುಮಾರ್ ಎಂಬುವರು ಆರ್.ಆರ್. ನಗರದ ಚನ್ನಸಂದ್ರದ ನಿವಾಸಿಯಾಗಿರುವ ಕರಿಷ್ಮಾ ಕ್ಲಾಸಿಕ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. 2015ರಲ್ಲಿ ನಿಮಿತಾ ಎಂಬುವರನ್ನು ಪ್ರವೀಣ್ ವರಿಸಿದ್ದರು.
ಈ ನಡುವೆ ಕಳೆದ ಏಪ್ರಿಲ್ 20ರಂದು ನಿಮಿತಾಗೆ ಉಸಿರಾಟ ಸಮಸ್ಯೆ ಕಂಡುಬಂದ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 2ರಂದು ಮೃತಪಟ್ಟಿದ್ದರು.
ಮೇ 13ಕ್ಕೆ ತಿಥಿ ಕಾರ್ಯ ಮಾಡಲು ಪತಿ ಪ್ರವೀಣ್ ಹಾಗೂ ಕುಟುಂಬಸ್ಥರು ಮುಂದಾಗಿದ್ದರು. ಈ ವೇಳೆ ಆಕೆ ಮೃತಪಟ್ಟ ಘಳಿಗೆ ಸರಿಯಿಲ್ಲ…ರಾಹುಕಾಲ ಇದೆ… ಮೂರು ತಿಂಗಳು ಮನೆಗೆ ಬರಬೇಡ ಎಂದು ಹೇಳಿ ಪತಿ ಪ್ರವೀಣ್ನನ್ನು ಮೃತಳ ಕುಟುಂಬಸ್ಥರು ಬೇರೆಡೆ ಕಳುಹಿಸಿದ್ದಾರೆ.
ಇದಾದ ಒಂದು ತಿಂಗಳ ಬಳಿಕ ಪ್ರವೀನ್ ಮನೆಗೆ ಮರಳಿದ್ದಾರೆ. ಅಷ್ಟರಲ್ಲಾಗಲೇ ಮನೆಯಿಲ್ಲಿದ್ದ 5 ರಿಂದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 3 ಲಕ್ಷ ರೂ. ನಗದು ಹಾಗೂ ಕಾರನ್ನು ಸಂಬಂಧಿಕರು ದೋಚಿದ್ದಾರೆ. ಮೃತಳ ಬಾವ ಶಿವಪ್ಪ, ಆಕೆಯ ಸಹೋದರಿಯರಾದ ಪ್ರೀತಿ, ಮಮತಾ, ಪಪ್ಪಚ್ಚಿ ಸೇರಿ ಹಲವರಿಂದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪ್ರವೀಣ್ ಆರೋಪಿಸಿದ್ದಾರೆ.
ಈ ಬಗ್ಗೆ ಆರ್ಆರ್ ನಗರ ಠಾಣೆಗೆ ದೂರು ನೀಡಿದರೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ. ಎಫ್ಐಆರ್ ಬದಲು ಎಸ್ಸಿಆರ್ ದಾಖಲಿಸಿ ಸೆಟಲ್ಮೆಂಟ್ಗೆ ಪೊಲೀಸರು ಮುಂದಾದ ಆರೋಪ ಕೇಳಿಬಂದಿದೆ.