ಉದ್ಯಮಿ ಮನೆಯಿಂದ ₹30 ಲಕ್ಷ ದರೋಡೆ: ಶಿಕ್ಷಕ ಸೇರಿ ಐವರ ಬಂಧನ | ಜನತಾ ನ್ಯೂಸ್
ಬಳ್ಳಾರಿ : ಕೊಟ್ಟೂರು ತಾಲೂಕಿನ ಬಸವೇಶ್ವರ ಬಡಾವಣೆಯ ಉದ್ಯಮಿ ಮಲ್ಲೇಶಪ್ಪ ಅವರ ಮನೆಯಲ್ಲಿನ ₹30 ಲಕ್ಷ ನಗದು ಕಳವು ಪ್ರಕರಣ ಸಂಬಂಧ ಸರ್ಕಾರಿ ಶಾಲೆಯ ಶಿಕ್ಷಕ ಸೇರಿದಂತೆ ಐವರು ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ತಾಲ್ಲೂಕಿನ ಕಾವಲಗುಂದಿ ಗ್ರಾಮದ ಜಿ.ಎಸ್.ಜೀವನ್, ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ಗ್ರಾಮದ ಪಂಚಾಯಿತಿ ಮಾಜಿ ಸದಸ್ಯ ಪಿ.ಶ್ರೀನಿವಾಸ, ತಾಲ್ಲೂಕಿನ ಚಪ್ಪರದಹಳ್ಳಿಯ ನಿವಾಸಿ ಹಾಗೂ ಕೂಡ್ಲಿಗಿ ಸೊಲ್ಲಮ್ಮ ಸರ್ಕಾರ ಶಾಲೆ ಶಿಕ್ಷಕ ಕೆ.ಬಸವರಾಜ, ಕೊಟ್ಟೂರಿನ ಯಲ್ಲೋಜಿ ರಾವ್, ತಾಲ್ಲೂಕಿನ ರಾಂಪುರ ಗ್ರಾಮದ ಎ.ರಾಮಚಂದ್ರ ಬಂಧಿತರು.
ಇವರಿಂದ ₹12.47 ಲಕ್ಷ ನಗದು, ಇನ್ನೋವಾ, ಓಮ್ನಿ, ಇಂಡಿಕಾ ಕಾರು ವಶಕ್ಕೆ ಪಡೆಯಲಾಗಿದೆ ಎಂದು ಡಿವೈಎಸ್ಪಿ ಹಾಲಮೂರ್ತಿರಾವ್ ಮಾಹಿತಿ ನೀಡಿದ್ದಾರೆ.
ಉದ್ಯಮಿ ಮಲ್ಲೇಶ್ ಅವರ ಮನೆಯಲ್ಲಿ ಏ.11ರಂದು ಹತ್ತು ಜನರ ದರೋಡೆಕೋರರು ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ, ಮನೆಯಲ್ಲಿ ಇದ್ದ ಗಂಡ ಹೆಂಡತಿಯನ್ನು ಹೆದರಿಸಿ ಮನೆಯಲ್ಲಿದ್ದ 30 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು.
ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದ್ದ ಜಿ.ಎಸ್.ಜೀವನ್ ಪತ್ತೆಗಾಗಿ ನಿರಂತರ ಹುಡುಕಾಟ ನಡೆಸಿದ್ದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸ್ಥಳೀಯರೂ ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಬಹಿರಂಗ ಪಡಿಸಿದ್ದ.