ರಾಜ್ಯದ ಬೆಳವಣಿಗೆ ಬಗ್ಗೆ ಪಕ್ಷದ ನಾಯಕರ ಜತೆ ಮಾತನಾಡಲು ಬಂದಿದ್ದೇನೆ : ಡಿಕೆ ಶಿವಕುಮಾರ್ | ಜನತಾ ನ್ಯೂಸ್
ದೆಹಲಿ : ಕಾಂಗ್ರೆಸ್ ವರಿಷ್ಠ, ಸಂಸದ ರಾಹುಲ್ ಗಾಂಧಿ ಜತೆ ರಾಜ್ಯದ ಬೆಳವಣಿಗೆ ಬಗ್ಗೆ ಚರ್ಚಿಸಿದ್ದೇನೆ ಎಂದು ರಾಹುಲ್ ಗಾಂಧಿ ಭೇಟಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ನಾಯಕತ್ವ ಕುರಿತಂತೆ ಚರ್ಚೆ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇದು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಸೋಮವಾರ ದೆಹಲಿಯಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ಪದಾಧಿಕಾರಿಗಳ ನೇಮಕ ಹಾಗೂ ಕೆಲವು ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಾಗುವುದು. ನಾನು ಕಳೆದ ಒಂದು ವರ್ಷದಿಂದ ಕೆಪಿಸಿಸಿ ಅಧ್ಯಕ್ಷನಾಗಿ ಎಲ್ಲವನ್ನೂ ಗಮನಿಸಿದ್ದು ಯಾರು ಕೆಲಸ ಮಾಡಿದ್ದಾರೆ, ಯಾರು ಹೆಸರಿಗೆ ಮಾತ್ರ ಇದ್ದಾರೆ ಎಂಬುದನ್ನು ಗಮನಿಸಿದ್ದೇನೆ. ಕೆಲವೊಂದು ಬದಲಾವಣೆ ಮಾಡಬೇಕಾಗಿದೆ. ಹೀಗಾಗಿ. ಪಕ್ಷದ ನಾಯಕರ ಜತೆ ಮಾತನಾಡಲು ಬಂದಿದ್ದೇನೆ ಎಂದಿದ್ದರು.
ಕೊವಿಡ್ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ನಿರ್ವಹಿಸುತ್ತಿರುವ ಕೆಲಸಗಳ ಬಗ್ಗೆ ವರದಿ ನೀಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷ ಸಂಘಟನೆ ಬಗ್ಗೆಯೂ ರಾಹುಲ್ ಜತೆ ಚರ್ಚೆ ನಡೆಸಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ನಡುವೆಯೆ ತಮ್ಮ ದೆಹಲಿ ಭೇಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರನ್ನೂ ಭೇಟಿಯಾಗಿದ್ದಾರೆ.
ರಾಜ್ಯ ಕಾಂಗ್ರೆಸ್ ಬಲವರ್ಧನೆ, ಪ್ರಗತಿ ಹಾಗೂ ಉನ್ನತಿಗೆ ಅಗತ್ಯವಿರುವ ಯಾವುದೇ ಕ್ರಮಕೈಗೊಳ್ಳುವುದಾರೆ ಅದಕ್ಕೆ ಪಕ್ಷದ ಹೈಕಮಾಂಡ್ ಸಹಕಾರ ಇರಲಿದೆ. ಅತ್ಯಂತ ಮಹತ್ವದ ನಿರ್ಧಾರ ಕೈಗೊಳ್ಳುವ ಸಂದರ್ಭ ಹೈಕಮಾಂಡನ್ನು ಹಾಗೂ ರಾಜ್ಯದ ಇತರ ಕಾಂಗ್ರೆಸ್ ನಾಯಕರನ್ನು ಪರಿಗಣಿಸಿ. ಸಣ್ಣಪುಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭ ನೀವೇ ವೈಯಕ್ತಿಕ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವದ ವಿಚಾರವಾಗಿ ಕಾಂಗ್ರೆಸ್ನಲ್ಲಿ ಕೆಲ ಗೊಂದಲ ಇರುವುದನ್ನು ಪ್ರಶ್ನಿಸಿದ ರಾಗಾ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ. ನಾಯಕತ್ವ ಜವಾಬ್ದಾರಿಯ ಕುರಿತು ಅಧಿಕಾರಕ್ಕೆ ಬಂದ ನಂತರ ಪಕ್ಷವೇ ತೀರ್ಮಾನಿಸುತ್ತದೆ.
ಯಾವುದೇ ರಾಜ್ಯ ನಾಯಕರಿಗೂ ತಮ್ಮದೇ ಆದ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲ.ಮುಂದಿನ ದಿನಗಳಲ್ಲಿ ಸಿಎಂ ಅಥವಾ ನಾಯಕತ್ವದ ವಿಚಾರವಾಗಿ ಯಾವುದೇ ನಾಯಕರನ್ನು ಮುಖ್ಯವಾಗಿಸಿಕೊಂಡು ಹೇಳಿಕೆ ನೀಡದಂತೆ ನೋಡಿಕೊಳ್ಳಿ. ಅನಗತ್ಯವಾಗಿ ಪದೇಪದೆ ಇಂತಹ ಮಾತನಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಡಿಕೆಶಿಯವರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.