ಮಮತಾ, ಪ.ಬಂಗಾಳ ಪ್ರಕರಣ ವಿಚಾರಣೆಯಿಂದ ಹಿಂದೆಕ್ಕೆ ಸರಿದ 2ನೇ ಸುಪ್ರಿಂ ನ್ಯಾಯಾದೀಶರು : ಏನು ಕಾರಣ?? | ಜನತಾ ನ್ಯೂಸ್
ನವದೆಹಲಿ : ಎರಡು ವಾರಗಳಲ್ಲಿ ಇಬ್ಬರು ಸುಪ್ರೀಂ ಕೋರ್ಟ್ ನ್ಯಾಯಧೀಶರು ಪಶ್ಚಿಮ ಬಂಗಾಳ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಂಬಂಧಪಟ್ಟ ಪ್ರಕರಣಗಳ ವಿಚಾರಣೆಯಿಂದ ಹಿಂದೆಕ್ಕೆ ಸರಿಯುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಗದಗೆಟ್ಟಿರುವ ಬಗ್ಗೆ ಪ್ರತಿಪಕ್ಷಗಳು ಸೇರಿದಂತೆ ರಾಜ್ಯದ ರಾಜ್ಯಪಾಲರೂ ಪದೇಪದೇ ಆರೋಪ ಮಾಡುತ್ತಿರುವ ಬೆನ್ನಲ್ಲೇ ಇಂತದೊಂದು ಕಳವಳಕಾರಿ ಘಟನೆ ನಡೆದಿದೆ.
ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರ ಬೆನ್ನಲ್ಲೇ, ಇದೀಗ ನ್ಯಾಯಮೂರ್ತಿ ಅನಿರುದ್ದ ಬೋಸ್ ಅವರು, ಸಿಎಂ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ನಾರದ ಲಂಚ ಪ್ರಕರಣ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಕೋಲ್ಕತ್ತಾ ಮೂಲದ ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರು ಈ ಪ್ರಕರಣದಿಂದ ಹಿಂದೆ ಸರಿದಿದ್ದು, "ನಾನು ಈ ಪ್ರಕರಣವನ್ನು ಕೇಳಲು ಬಯಸುವುದಿಲ್ಲ", ಎಂದಿದ್ದಾರೆ.
ಇದು ನಾರದ ಲಂಚ ಪ್ರಕರಣದಲ್ಲಿ ತಮ್ಮ ಅಫಿಡವಿಟ್ಗಳನ್ನು ದಾಖಲಿಸಲು ಕೋಲ್ಕತ್ತಾ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಬಂಗಾಳ ಮುಖ್ಯಮಂತ್ರಿ ಮತ್ತು ರಾಜ್ಯ ಕಾನೂನು ಸಚಿವ ಮೊಲೊಯ್ ಘಟಕ್ ಅವರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದ್ದಾಗಿದೆ.
ಕಳೆದ ವಾರ, ಕೋಲ್ಕತ್ತಾ ಮೂಲದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಮೇ 2ರ ಚುನಾವಣಾ ಪಲಿತಾಂಶದ ನಂತರ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಿಂದ ಹೊರಗುಳಿಯಲು ಇಚ್ಚಿಸಿದ್ದರು. ಈ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಭಾರಿ ಜಯವನ್ನು ಗಳಿಸಿದ್ದರು. ರಾಜಕೀಯ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಸಂಬಂಧಪಟ್ಟ ಹಾಗೆ ಸಿಬಿಐ ಅಥವಾ ವಿಶೇಷ ತನಿಖಾ ತಂಡ ತನಿಖೆ ನಡೆಸಬೇಕೆಂದು ಮನವಿಯಲ್ಲಿ ಕೇಳಲಾಗಿದೆ.
ನ್ಯಾಯಮೂರ್ತಿ ಹೇಮಂತ್ ಗುಪ್ತಾ, ಅನಿರುದ್ಧ ಬೋಸ್ ಅವರ ಪೀಠ, ನಾರದ ಲಂಚ ಪ್ರಕರಣ ಕುರಿತು ವಿಚಾರಣೆ ಆರಂಭಿಸಲು ಮುಂದಾಗಿತ್ತು. ಈ ವೇಳೆ ಜಸ್ಟೀಸ್ ಬೋಸ್ ಪ್ರಕರಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಹೀಗಾಗಿ ಹೇಮಂತ್ ಗುಪ್ತಾ, ಮತ್ತೊಂದು ಪೀಠ ಈ ಪ್ರಕರಣ ಆಲಿಸುವಂತೆ ಕೇಳಿಕೊಂಡಿದ್ದರು. ಇದೀಗ ಈ ಪ್ರಕರಣವನ್ನು ಜಸ್ಟೀಸ್ ವಿನೀತ್ ಸರನ್ ಪೀಠ ಆಲಿಸಲಿದೆ.
ಈ ಪ್ರಕರಣದಲ್ಲಿ ನಾಲ್ವರು ನಾಯಕರನ್ನು ಬಂಧಿಸಿದ ನಂತರ ಸಿಬಿಐ ತನ್ನ ಕಾನೂನು ಕರ್ತವ್ಯ ನಿರ್ವಹಿಸುವುದನ್ನು ತಡೆಯುವಲ್ಲಿ ರಾಜ್ಯ ಆಡಳಿತ ಪಕ್ಷದ ನಾಯಕರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.