ಇಂದು ಕಾರವಾರಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ | ಜನತಾ ನ್ಯೂಸ್
ಕಾರವಾರ : ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರಕನ್ನಡ ಜಿಲ್ಲೆಯ ಕಾರವಾರ ಹಾಗೂ ಕೊಚ್ಚಿಗೆ ಭೇಟಿ ನೀಡಲಿದ್ದಾರೆ.
ಕಾರವಾರದ ಐಎನ್ಎಸ್ ಕದಂಬಕ್ಕೆ ಗುರುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆಯಲೆ ನೌಕಾನೆಲೆಯ ಸುತ್ತಲೂ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.
ಕದಂಬ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಾಮಗಾರಿಗಳ ವೀಕ್ಷಣೆಗೆ ರಾಜನಾಥ್ ಸಿಂಗ್ ಆಗಮಿಸುತ್ತಿದ್ದಾರೆ. ಇದೇ ವೇಳೆ ನೌಕಾನೆಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಜಟ್ಟಿಯೊಂದನ್ನು ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ ದೆಹಲಿಯಿಂದ ಗೋವಾಕ್ಕೆ ರಾಜನಾಥ್ ಸಿಂಗ್ ಆಗಮಿಸಲಿದ್ದು, ಅಲ್ಲಿಂದ 1.30ಕ್ಕೆ ಹೆಲಿಕಾಪ್ಟರ್ ಮೂಲಕ ನೌಕಾನೆಲೆಗೆ ಆಗಮಿಸಲಿದ್ದಾರೆ. ಮೊದಲು ಜಟ್ಟಿ ಕಾಮಗಾರಿಯ ಉದ್ಘಾಟನೆ ನಡೆಸಿ ನಂತರ ಎರಡನೇ ಹಂತದ ವಿಸ್ತರಣೆ ಕಾಮಗಾರಿಗಳನ್ನ ವೀಕ್ಷಿಸಿ, ಅಧಿಕಾರಿಗಳ ಜೊತೆ ಈ ಸಂಬಂಧ ಚರ್ಚೆ ನಡೆಸಲಿದ್ದಾರೆ.
ಕಾರವಾರದಲ್ಲಿ ನಡೆಯುತ್ತಿರುವ "ಪ್ರಾಜೆಕ್ಟ್ ಸೀಬರ್ಡ್" ಯೋಜನೆ ಹಾಗೂ ಕೊಚ್ಚಿಯಲ್ಲಿನ ವಿಮಾನವಾಹಕ ನೌಕೆಯ ನಿರ್ಮಾಣದ ಪ್ರಗತಿ ಬಗ್ಗೆ ಸಚಿವ ರಾಜನಾಥ್ ಸಿಂಗ್ ಪರಿಶೀಲಿಸಲಿದ್ದಾರೆ. ಭೇಟಿ ವೇಳೆ ರಾಜನಾಥ್ ಸಿಂಗ್ ಅವರಿಗೆ ಸ್ಥಳೀಯ ಬಿಜೆಪಿ ನಾಯಕರು ಸಾಥ್ ನೀಡಲಿದ್ದಾರೆ.
ಕಾರವಾರ, ಕೊಚ್ಚಿ ಭೇಟಿ ಕುರಿತು ರಾಜನಾಥ್ ಸಿಂಗ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಕಾರವಾರ ಹಾಗೂ ಕೊಚ್ಚಿಗೆ ಎರಡು ದಿನಗಳ ಕಾಲ ಭೇಟಿ ನೀಡುತ್ತಿದ್ದು, ದೆಹಲಿಯಿಂದ ತೆರಳಲಾಗುತ್ತಿದೆ. ಭೇಟಿ ವೇಳೆ ಕಾರವಾರ ನೌಕಾನೆಲೆ ವಿಸ್ತರಣೆಯ ಕಾಮಗಾರಿಗಳನ್ನು ಪರಿಶೀಲನೆ ಹಾಗೂ ಕೊಚ್ಚಿಯಲ್ಲಿ ಇಂಡಿಜಿನಸ್ ವಿಮಾನವಾಹಕ ನೌಕೆ (ಐಎಸಿ) ನಿರ್ಮಾಣದ ಪ್ರಗತಿಯನ್ನೂ ಪರಿಶೀಲಿಸಲಿದ್ದೇನೆಂದು ಹೇಳಿದ್ದಾರೆ.