ಈಜುಕೊಳ ವಿವಾದ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಡಿ. ರೂಪಾ ಕಿಡಿ | ಜನತಾ ನ್ಯೂಸ್
ಮೈಸೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇದೀಗ ಮಹಿಳಾ ಐಪಿಎಸ್ ಅಧಿಕಾರಿ ಡಿ. ರೂಪಾ ಕಿಡಿಕಾರಿದ್ದಾರೆ.
ರಾಜ್ಯವು ಕೋವಿಡ್ ಸಂಕಷ್ಟವನ್ನು ಎದುರಿಸುತ್ತಿರುವ ಸಮಯದಲ್ಲಿ ಸಾರ್ವಜನಿಕರ ಹಣವನ್ನು ಈಜುಕೊಳ ನಿರ್ಮಿಸಲು ಬಳಸಿರುವುದನ್ನು ಐಪಿಎಸ್ ಅಧಿಕಾರಿ ಡಿ ರೂಪಾ ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರೂಪಾ, ಈ ನಡೆಯು ರೋಹಿಣಿ ಅವರ ನೈತಿಕ ಪತನವನ್ನು ತೋರಿಸುತ್ತದೆ ಎಂದಿದ್ದಾರೆ.
ಕೊರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವನ್ನು ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು, ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ. ಕಟ್ಟಲು ಪರವಾನಗಿ ತೆಗೆದುಕೊಂಡಿಲ್ಲ ಎನ್ನುವುದು ನಂತರದ ವಿಚಾರ ಎಂದಿರುವ ಅವರು ಕಟ್ಟುವುದನ್ನು ಮುಂದೂಡಬಹುದಿತ್ತು, ಎಂದು ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಮಹಿಳಾ ಐಪಿಎಸ್ ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸರಕಾರಿ ನಿವಾಸದ ಬಳಿಕ ನಿಯಮಗಳನ್ನು ಗಾಳಿಗೆ ತೂರಿ ಸುಮಾರು 32 ಲಕ್ಷ ರೂ ವೆಚ್ಚದಲ್ಲಿ ಈಜುಕೊಳ ನಿರ್ಮಿಸಿರುವ ಆರೋಪ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಈಜುಕೊಳ ನಿರ್ಮಾಣಕ್ಕೆ ತಾಂತ್ರಿಕ ವರ್ಗ ಮತ್ತು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಆಡಳಿತಾತ್ಮಕ ಮಂಜೂರಾತಿ ಪಡೆದಿಲ್ಲ ಎಂದು ಪ್ರಾದೇಶಿಕ ಆಯುಕ್ತರು ರಾಜ್ಯ ಸರಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.