ಪ್ರಧಾನಿ ಮೋದಿ ನೇತ್ರತ್ವದಲ್ಲಿ ಗುಪ್ಕರ್ ಮೈತ್ರಿಕೂಟದ ಕಾಶ್ಮೀರಿ ನಾಯಕರೊಂದಿಗೆ ಸಭೆ ಆರಂಭ | ಜನತಾ ನ್ಯೂಸ್
ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ ಮತ್ತು ಕೇಂದ್ರಾಡಳಿತ ಪ್ರದೇಶದ ಮುಂದಿನ ಕ್ರಮಗಳ ಕುರಿತು ಗುಪ್ಕರ್ ಮೈತ್ರಿಕೂಟದ ಕಾಶ್ಮೀರಿ ನಾಯಕರೊಂದಿಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲ್ಲಿ ಇಂದು ಸರ್ವಪಕ್ಷ ಸಭೆಯ ರಾಷ್ಟ್ರ ರಾಜಧಾನಿಯಲ್ಲಿ ಪ್ರಾರಂಭವಾಗಿದೆ. ಈ ಮಧ್ಯೆ ಜಮ್ಮುವಿನ ರಾಜಕೀಯ ನಾಯಕರನ್ನು ಈ ಮಾತುಕತೆಗೆ ಕರೆಯದೆ ಇರುವ ಕುರಿತು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.
2019 ರ ಆಗಸ್ಟ್ 5ರಲ್ಲಿ ಜೆಎಕೆ ಗೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲು ಕೇಂದ್ರ ನಿರ್ಧರಿಸಿದ ನಂತರ ಇಂತಹ ಮೊದಲ ಸಭೆ ಇದಾಗಿದೆ. ಈ ಬೆಳವಣಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಭಾಗವಾಗಿ ವಿಭಜಿಸಿ ಲಡಾಖ್ ಸೇರಿದಂತೆ ಎರಡು ಕೇಂದ್ರಾಡಳಿತ ಪ್ರದೇಶವನ್ನು ರಚಿಸಲಾಗಿತ್ತು.
ಚುನಾಯಿತ ಪ್ರತಿನಿಧಿಗಳ ಮರಳುವಿಕೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿ ಈ ಸಭೆಯನ್ನು ಗಮನಿಸಲಾಗುತ್ತಿದೆ. ನವದೆಹಲಿಯಲ್ಲಿ ಜೆ ಎ ಕೆ ರಾಜಕೀಯ ಪಕ್ಷಗಳ ಒಕ್ಕೂಟವಾದ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್(ಪಿಎಜಿಡಿ) ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿಯಾಗುತ್ತಿರುವುದರಿಂದ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ತೀವ್ರ ಎಚ್ಚರಿಕೆ ವಹಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳ ಸಭೆ ನವದೆಹಲಿಯ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ನಡೆಯುತ್ತಿದೆ. ಜೆ ಎ ಕೆನಲ್ಲಿ ಭವಿಷ್ಯದ ರಾಜಕೀಯ ಕ್ರಮವನ್ನು ತಿರ್ಮಾನಿಸಲು ಪ್ರದೇಶದ ನಾಲ್ಕು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 14 ನಾಯಕರೊಂದಿಗೆ ಚರ್ಚಿಸುವ ನಿರ್ಣಾಯಕ ಸಭೆಯಾಗಿದೆ.