ದಾಂಪತ್ಯ ಕಲಹ : ಸ್ವಂತ ಮಗುವನ್ನೇ ಕೊಂದು ಹೂತುಹಾಕಿದ ದಂಪತಿ | ಜನತಾ ನ್ಯೂಸ್
ಹಾಸನ : ರಫೀಕ್ ಉಲ್ಲ ಇಸ್ಲಾಂ ಮತ್ತು ಸಲ್ಮಾ ಎಂಬ ದಂಪತಿ ಹೆತ್ತ ಮಗನನ್ನೇ ಕೊಲೆ ಮಾಡಿ ಹೂತಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಆಲೂರು ತಾಲೂಕಿನ ಕೆ ಹೊಸಕೋಟೆ ಸಮೀಪದ ಕಾಡ್ಲೂರು ಕೊಪ್ಪಲು ಗ್ರಾಮದಲ್ಲಿಇಂತಹ ಅಮಾನವೀಯ ಘಟನೆ ನಡೆದಿದೆ.
ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ತಾಲೂಕಿನ ಕೆ.ಹೊಸಕೋಟೆ ಹೋಬಳಿಗೆ ಆಗಮಿಸಿದ್ದ ಕೂಲಿಕಾರ್ಮಿಕರ ಕುಟುಂಬಸ್ಥರಿಂದ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಪತಿ, ಪತ್ನಿ ನಡುವೆ ಕೌಟುಂಬಿಕ ಕಾರಣಕ್ಕೆ ಜಗಳ ಪ್ರಾರಂಭವಾಗಿದೆ. ಈ ಜಗಳ ತಾರಕಕ್ಕೇರಿದಾಗ ಆಟವಾಡುತ್ತಿದ್ದ ಮಗು ಮಧ್ಯೆ ಬಂದ ಹಿನ್ನೆಲೆಯಲ್ಲಿ, ಮಗುವಿನ ಮೇಲೆ ಆಕಸ್ಮಿಕವಾಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆದು, ಮಗು ಸಾವನ್ನಪ್ಪಿದೆ.
ನಂತರ ಮಗುವನ್ನು ಏನು ಮಾಡುವುದು ಎಂದು ತಿಳಿಯದೆ ರಾತ್ರೋರಾತ್ರಿ ಯಾರಿಗೂ ತಿಳಿಯದಂತೆ ಕಾಫಿತೋಟದ ಹಿಂಭಾಗ ಮಗನನ್ನು ಹೂತು ದಂಪತಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ರು. ಆದರೆ ವಾರದಿಂದ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಆದರೂ ಹೆತ್ತವರು ದೂರು ನೀಡದೆ ಸುಮ್ಮನಾಗಿದ್ದರ ಬಗ್ಗೆ ಸ್ಥಳೀಯರಲ್ಲಿ ಅನುಮಾನ ಮೂಡಿದೆ.
ಮಗುವನ್ನು ಹೊಡೆದು ಸಾಯಿಸಿ ಶವವನ್ನು ಹೂತು ಹಾಕಲಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಆದರೆ ಮಗು ಅನಾರೋಗ್ಯದಿಂದಾಗಿ ಮೃತಪಟ್ಟಿದೆ ಎಂಬುದು ಪೋಷಕರ ವಾದವಾಗಿದೆ.
ಈ ಕುರಿತು ಸ್ಥಳೀಯರೊಬ್ಬರು ನೀಡಿದ ದೂರಿನ ಮೇರೆಗೆ ಒಂದೂವರೆ ವರ್ಷದ ಗಂಡು ಮಗುವಿನ ಮೃತದೇಹ ಹೊರತೆಗೆದು ಪರಿಶೀಲನೆ ನಡೆಸಲಾಗುತ್ತಿದೆ. ಉಪವಿಭಾಗಾಧಿಕಾರಿ ಮಾರ್ಗದರ್ಶನ ದಲ್ಲಿ ಸ್ಥಳಕ್ಕೆ ಭೇಟಿ ನೀಡಿರುವ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳ ತಂಡ ಹೂತಿರುವ ಶವವನ್ನು ಹೊರ ತೆಗೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.