ಕೊರೊನಾದಿಂದ ಸಾರಿಗೆ ಇಲಾಖೆಗೆ 4 ಸಾವಿರ ಕೋಟಿಗೂ ಹೆಚ್ಚು ನಷ್ಟ; ಸಚಿವ ಲಕ್ಷ್ಮಣ ಸವದಿ | ಜನತಾ ನ್ಯೂಸ್
ಬೆಂಗಳೂರು : ಕೊರೊನಾದಿಂದ ಸಾರಿಗೆ ಇಲಾಖೆಗೆ ಸುಮಾರು ನಾಲ್ಕು ಸಾವಿರ ಕೋಟಿ ರೂ. ಕ್ಕಿಂತ ಹೆಚ್ಚು ನಷ್ಟವಾಗಿದೆ ಎಂದು ಬೆಳಗಾವಿಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಮೊದಲಿಗೆ ಕೊರೊನಾ ಮೊದಲ ಅಲೆ ಬಂತು. ನಂತರ ಕೆಎಸ್ಆರ್ಟಿಸಿ ನೌಕರರು ಮುಷ್ಕರ ನಡೆಸಿದರು. ಇದು ಮುಗಿಯಿತು ಎನ್ನುವಾಗ ಕೊರೊನಾ ಎರಡನೇ ಅಲೆ ಬಂತು. ಇದರಿಂದ ಸಂಸ್ಥೆಗೆ ಭಾರಿ ನಷ್ಟವಾಗಿದೆ ಎಂದು ವಿವರಿಸಿದರು.
ಇಲಾಖೆ ಭಾರಿ ನಷ್ಟ ಅನುಭವಿಸಿದರೂ ನೌಕರರಿಗೆ ಪೂರ್ಣ ಪ್ರಮಾಣದಲ್ಲಿ ವೇತನ ನೀಡಲಾಗಿದೆ. ಹಣಕಾಸಿನ ಅಗತ್ಯಗಳಿಗಾಗಿ ಸರಕಾರ 2,600 ಕೋಟಿ ರೂ.ಗಳನ್ನು ನೀಡಿದೆ ಎಂದು ಅವರು ಮಾಹಿತಿ ನೀಡಿದರು.
ಸದ್ಯ ಬಸ್ನಲ್ಲಿ ಶೇ. 50ರಷ್ಟು ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗಳಿಸುತ್ತಿರುವ ಆದಾಯ ಡೀಸೆಲ್ ಹಾಗೂ ಸಂಬಳಕ್ಕೂ ಸಾಲುತ್ತಿಲ್ಲ. ವೇತನ ನೀಡಲು ಸರಕಾರದಿಂದ ಹಣ ಪಡೆಯಲೇಬೇಕಾಗಿದೆ. ಬೇರೆ ದಾರಿ ಇಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
ಜುಲೈ 5ರ ನಂತರ ಪ್ರತಿಭಟನೆ ನಡೆಸಲ್ಲ ಎಂದು ಸಾರಿಗೆ ಸಂಘಟನೆಗಳ ಮುಖಂಡರು ಹೇಳಿದ್ದಾರೆ. ತಪ್ಪು ಮಾಹಿತಿ ಕೊಟ್ಟು ಅನೇಕರು ಹುನ್ನಾರ ಮಾಡಿದರು. ನಿಮ್ಮ ಜತೆ ಕೈಜೋಡಿಸುವುದಾಗಿ ಮುಖಂಡರು ಹೇಳಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬೇಕು, ಇಲಾಖೆಗೆ ಹಾನಿ ಆಗಬೇಕು ಅಂತಾ ಹುನ್ನಾರ ನಡೆಸಿ ಪ್ರತಿಭಟನೆ ನಡೆಸಿದ್ದರು. ಹುನ್ನಾರ ಮಾಡಿದವರು ಯಾರೆಂದು ಕೆಲವೇ ದಿನಗಳಲ್ಲಿ ಬಹಿರಂಗವಾಗುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.