ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ : ಎಂ.ಬಿ.ಪಾಟೀಲ್ | ಜನತಾ ನ್ಯೂಸ್
ಮೈಸೂರು : ಎಲ್ಲರಲ್ಲಿಯೂ ಸಿಎಂ ಆಗಬೇಕು ಅನ್ನೊ ಆಸೆ ಇರುತ್ತದೆ. ಹಾಗಂತ ಎಲ್ಲರೂ ಸಿಎಂ ಆಗಲು ಸಾಧ್ಯವಿಲ್ಲ. ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು.
ನಾವೇ ಮುಖ್ಯಮಂತ್ರಿ ಅಂತ ಸೆಲ್ಪ್ ಡಿಕ್ಲೇರ್ ಮಾಡಿಕೊಳ್ಳುವುದು ಸರಿಯಲ್ಲ. ಡಿಕ್ಲೇರ್ ಮಾಡಿಕೊಂಡವರೆಲ್ಲ ಸಿಎಂ ಆಗುವುದಿಲ್ಲ. ಯಾರು ಸಿಎಂ ಆಗಬೇಕು ಎಂಬುದನ್ನು ಜನ ತೀರ್ಮಾನ ಮಾಡಬೇಕು. ಪಕ್ಷ ಅಧಿಕಾರಕ್ಕೆ ಬರಬೇಕು ಬಳಿಕ ಹೈಕಮಂಡ್ ನಿರ್ಧಾರ ಮಾಡುತ್ತದೆ ಎಂದು ಎಂ.ಬಿ.ಪಾಟೀಲ್ ಹೇಳಿದರು
ಬಿಎಸ್ವೈ ಬಳಿಕ ವೀರಶೈವ ಲಿಂಗಾಯತರಲ್ಲಿ ಪರ್ಯಾಯ ನಾಯಕರಿಲ್ಲ ಎಂಬ ಚರ್ಚೆ ವಿಚಾರಕ್ಕೆ ಮಾತನಾಡಿ.. ಯಡಿಯೂರಪ್ಪ ಒಬ್ಬ ದೊಡ್ಡ ನಾಯಕ, ಅದರಲ್ಲಿ ಎರಡು ಮಾತಿಲ್ಲ. ಲಿಂಗಾಯತ ಸಮುದಾಯದಲ್ಲಿ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ಅವರ ನಂತರ ಎರಡನೇ ಹಂತದ ನಾಯಕರ ನಾಯಕರೂ ಬೆಳೆದಿದ್ದಾರೆ. ಕಾಂಗ್ರೆಸ್ನಲ್ಲಿ ನಾನು, ಖಂಡ್ರೆ, ಶರಣ್ ಪ್ರಕಾಶ್ ಪಾಟೀಲ್ ಇದ್ದೇವೆ. ಬಿಜೆಪಿಯಲ್ಲಿ ಬೊಮ್ಮಾಯಿ, ಶೆಟ್ಟರ್, ಯತ್ನಾಳ್ ಸೋಮಣ್ಣ, ಖತ್ತಿ, ಬೆಲ್ಲದ್ ಇದ್ದಾರೆ. ಯಡಿಯೂರಪ್ಪ ನಂತರವೂ ಲಿಂಗಾಯತ ಸಮುದಾಯ ದೊಡ್ಡದಿದೆ ಎಂದರು.
ಈಗಾಗಲೇ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ಯಾರೂ ಸಿಎಂ ವಿಚಾರದ ಬಗ್ಗೆ ಮಾತನಾಡಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಹಾಗಾಗಿ ಯಾರೂ ಸಹ ಸಿಎಂ ವಿಚಾರದ ಬಗ್ಗೆ ಮಾತನಾಡುವುದಿಲ್ಲ, ಕೆಲವರು ಅಭಿಮಾನ ಪೂರ್ವಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಅಂತಹ ಅಭಿಮಾನದ ಹೇಳಿಕೆಗಳನ್ನೂ ನೀಡದಂತೆ ಸೂಚಿಸಲಾಗಿದೆ ಎಂದು ಹೇಳಿದರು.
ನಾವು150 ಸೀಟು ಪಡೆದು ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿದೆ. ನಂತರ ಯಾರು ಮುಖ್ಯಮಂತ್ರಿ ಎಂದು ಹೈಕಮಾಂಡ್ ತೀರ್ಮಾನ ಮಾಡಲಿದೆ. ಚುನಾವಣೆಗೂ ಮುನ್ನ ಇಂತವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲ ಎಂದು ಹೇಳಿದರು.